ಬೆಂಗಳೂರು: ಮಾದನಾಯಕನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಶಿವಲಿಂಗ (46) ಎಂಬುವರ ಕೊಲೆ ಪ್ರಕರಣ ಭೇದಿಸಿರುವ ಪೊಲೀಸರು, ಮೃತರ ಪತ್ನಿ ಶೋಭಾ (44) ಹಾಗೂ ಅವರ ಜೊತೆ ಸಲುಗೆ ಹೊಂದಿದ್ದ ರಾಮು (45) ಎಂಬುವರನ್ನು ಬಂಧಿಸಿದ್ದಾರೆ.
‘ಕಳೆದ ಜೂನ್ನಲ್ಲಿ ಶಿವಲಿಂಗ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಹಲವರನ್ನು ವಿಚಾರಣೆ ನಡೆಸಲಾಗಿತ್ತು. ಆರು ತಿಂಗಳ ತನಿಖೆಯಲ್ಲಿ ಸಿಕ್ಕ ಪುರಾವೆಗಳನ್ನು ಆಧರಿಸಿ ಇದೀಗ ಶೋಭಾ ಹಾಗೂ ರಾಮು ಅವರನ್ನು ಬಂಧಿಸಲಾಗಿದೆ. ತಾವೇ ಕೊಲೆ ಮಾಡಿರುವುದಾಗಿ ಅವರು ತಪ್ಪೊಪ್ಪಿಕೊಂಡಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಕೊಲೆಯಾದ ಶಿವಲಿಂಗ ಕುಣಿಗಲ್ನವರು. ಪತ್ನಿ ಶೋಭಾ ಜೊತೆ ಬೆಂಗಳೂರಿಗೆ ಬಂದು ತೋಟದಗುಡ್ಡದಹಳ್ಳಿಯಲ್ಲಿ ರಸ್ತೆ ಬದಿ ಹೋಟೆಲ್ ಇಟ್ಟುಕೊಂಡಿದ್ದರು. ಅದೇ ಹೋಟೆಲ್ನಲ್ಲೇ ರಾಮು ಕೆಲಸಕ್ಕೆ ಸೇರಿದ್ದರು. ಬನ್ನೇರುಘಟ್ಟದಲ್ಲೂ ಹೋಟೆಲ್ ಹೊಂದಿದ್ದ ಶಿವಲಿಂಗ, ಆಗಾಗ ಅಲ್ಲಿಗೂ ಹೋಗಿ ಬರುತ್ತಿದ್ದರು. ಕೆಲಸಗಾರರನೇ ಆ ಹೋಟೆಲ್ ನಿರ್ವಹಣೆ ಮಾಡುತ್ತಿದ್ದರು.’
‘ಶೋಭಾ ಹಾಗೂ ರಾಮು ನಡುವೆ ಸಲುಗೆ ಬೆಳೆದಿತ್ತು. ಶಿವಲಿಂಗ ಇಲ್ಲದ ವೇಳೆಯಲ್ಲಿ ರಾಮು ಅವರನ್ನು ಶೋಭಾ ಮನೆಗೆ ಕರೆಸಿಕೊಳ್ಳುತ್ತಿದ್ದರು. ಲಾಕ್ಡೌನ್ ಆಗುತ್ತಿದ್ದಂತೆ ಹೋಟೆಲ್ ಬಂದ್ ಆಗಿತ್ತು. ಅಂದಿನಿಂದ ಶಿವಲಿಂಗ ಮನೆಯಲ್ಲೇ ಉಳಿದುಕೊಂಡಿದ್ದರು. ಅದರಿಂದಾಗಿ ಶೋಭಾ ಹಾಗೂ ರಾಮು ಒಟ್ಟಿಗೆ ಸೇರಲು ಸಾಧ್ಯವಾಗಿರಲಿಲ್ಲ’ ಎಂದೂ ಮೂಲಗಳು ಹೇಳಿವೆ.
ಪತಿ ಕೊಂದು ಕಥೆ ಕಟ್ಟಿದ್ದರು: ‘ತಾವಿಬ್ಬರು ಒಟ್ಟಿಗೆ ಸೇರಲು ಆಗುತ್ತಿಲ್ಲವೆಂದು ಮಾತನಾಡಿಕೊಂಡಿದ್ದ ಶೋಭಾ ಹಾಗೂ ರಾಮು, ಶಿವಲಿಂಗ ಅವರನ್ನೇ ಕೊಲೆ ಮಾಡಲು ಸಂಚು ರೂಪಿಸಿದ್ದರು. ಅದರಂತೆ ಜೂನ್ 1ರಂದು ಶಿವಲಿಂಗ ಅವರನ್ನು ಹತ್ಯೆ ಮಾಡಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಲಾಕ್ಡೌನ್ನಿಂದಾಗಿ ನಷ್ಟ ಅನುಭವಿಸಿರುವ ಪತಿ, ಮನೆಯಲ್ಲಿದ್ದ ₹ 1.25 ಲಕ್ಷ ತೆಗೆದುಕೊಂಡು ಪರಾರಿಯಾಗಿದ್ದಾರೆ’ ಎಂದು ಕಥೆ ಕಟ್ಟಿದ್ದ ಶೋಭಾ, ಅದನ್ನೇ ಸಂಬಂಧಿಕರಿಗೂ ಹೇಳಿ ನಂಬಿಸಿದ್ದರು. ಶೋಭಾ ಹಾಗೂ ರಾಮು ನಡುವಿನ ಒಡನಾಟ ಗಮನಿಸಿ ಅನುಮಾನಗೊಂಡಿದ್ದ ಸಂಬಂಧಿಕರೊಬ್ಬರು, ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರನ್ವಯ ಅವರಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಯಿತು’ ಎಂದೂ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.