ADVERTISEMENT

ಜನಪರ ಹೋರಾಟಗಳ ಶಕ್ತಿ ದೊರೆಸ್ವಾಮಿ: ಲೇಖಕಿ ಬಿ.ಟಿ.ಲಲಿತಾ ನಾಯಕ್

​ಪ್ರಜಾವಾಣಿ ವಾರ್ತೆ
Published 26 ಮೇ 2022, 20:16 IST
Last Updated 26 ಮೇ 2022, 20:16 IST
ಕಾರ್ಯಕ್ರಮದಲ್ಲಿ ಹಳ್ಳಿ ಮಕ್ಕಳ ಸಂಘದ ಯಡಿಯೂರು ಮಂಜುನಾಥ್, ಸಾಮಾಜಿಕ ಕಾರ್ಯಕರ್ತರಾದ ಬಾಬು ಕೋವಿ, ಪ್ರಭಾ ಬೆಳವಂಗಲ, ವಿಜಯಮ್ಮ, ವೆಂಕಟೇಶ್ ಎಚ್.ಎಂ ಹಾಗೂ ಇತರರು ಎಚ್.ಎಸ್. ದೊರೆಸ್ವಾಮಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಹಳ್ಳಿ ಮಕ್ಕಳ ಸಂಘದ ಯಡಿಯೂರು ಮಂಜುನಾಥ್, ಸಾಮಾಜಿಕ ಕಾರ್ಯಕರ್ತರಾದ ಬಾಬು ಕೋವಿ, ಪ್ರಭಾ ಬೆಳವಂಗಲ, ವಿಜಯಮ್ಮ, ವೆಂಕಟೇಶ್ ಎಚ್.ಎಂ ಹಾಗೂ ಇತರರು ಎಚ್.ಎಸ್. ದೊರೆಸ್ವಾಮಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಎಚ್‌.ಎಸ್‌.ದೊರೆಸ್ವಾಮಿ ಅವರು ರಾಜ್ಯದಾದ್ಯಂತ ಎಲ್ಲಾ ಜನಪರ ಹೋರಾಟಗಳ ಶಕ್ತಿಯಾಗಿದ್ದರು. ಕೋಮುವಾದದ ವಿರುದ್ಧ ಅವರದು ರಾಜಿಯಿಲ್ಲದ ಹೋರಾಟವಾಗಿತ್ತು’ ಎಂದು ಲೇಖಕಿ ಬಿ.ಟಿ.ಲಲಿತಾ ನಾಯಕ್ ಅಭಿಪ್ರಾಯಪಟ್ಟರು.

‘ಎಚ್.ಎಸ್.ದೊರೆಸ್ವಾಮಿ ಅನುಯಾಯಿಗಳ ಬಳಗ'ದ ವತಿಯಿಂದ ಗುರುವಾರ ಏರ್ಪಡಿಸಿದ್ದ ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಎಚ್.ಎಸ್.ದೊರೆಸ್ವಾಮಿ ಅವರ ಮೊದಲ ವರ್ಷದ ಸಂಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೊರೆಸ್ವಾಮಿ ಅವರ ಹೋರಾಟದ ಬದುಕನ್ನು ಅವರ ಅನುಯಾಯಿಗಳು, ಒಡನಾಡಿಗಳು ಹೋರಾಟಗಾರರು ಸ್ಮರಿಸಿದರು.

ಮಾಜಿ ಐಎಎಸ್ ಅಧಿಕಾರಿ ಶಶಿಕಾಂತ್ ಸೆಂಥಿಲ್‌, ‘ಇನ್ನು ಮುಂದೆ ಈ ಹೋರಾಟಗಳನ್ನು ಮುಂದುವರೆಸುವ ಹೊಣೆ ಯುವ ಪೀಳಿಗೆಯದು ಎಂದಿದ್ದರು’ ಎಂದು ನೆನಪಿಸಿಕೊಂಡರು.

ADVERTISEMENT

ಹೋರಾಟಗಾರ ನೂರ್ ಶ್ರೀಧರ್, ‘ಬದುಕಿನ ಕೊನೆಯ ದಿನಗಳಲ್ಲಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇದ್ದಾಗಲೂ ದೊರೆಸ್ವಾಮಿ ಅವರು ‘ಹೋರಾಟಕ್ಕೆ ಸೋಲೆಂಬುದಿಲ್ಲ’ ಎಂದು ಆತ್ಮವಿಶ್ವಾಸದಿಂದ ಹೇಳಿದ್ದರು. ಅವರು ವಹಿಸಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸಿಕೊಂಡು ಹೋಗಬೇಕಿದೆ’ ಎಂದರು.

ಸಿರಿಮನೆ‌ ನಾಗರಾಜ್, ‘ದೇಶದಲ್ಲಿ ಬಡತನವನ್ನು ಸಂಪೂರ್ಣ ನಿವಾರಣೆ ಮಾಡುವ ಹಾಗೂ ಕಟ್ಟಕಡೆಯ ಮನುಷ್ಯನ ಕಣ್ಣೀರನ್ನೂ ಒರೆಸುವ ಗಾಂಧೀಜಿಯವರ ಆಶಯ ಸಾಕಾರವಾಗುವವರೆಗೂ ಸ್ವಾತಂತ್ರ್ಯ ಹೋರಾಟ ಮುಂದುವರಿಯುತ್ತದೆ ಎಂದು ದೊರೆಸ್ವಾಮಿ ಹೇಳುತ್ತಿದ್ದರು. ಈ ಆಶಯವನ್ನು ಎಲ್ಲರೂ ಒಗ್ಗೂಡಿ ಈಡೇರಿಸಬೇಕು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಲೇಖಕಿ ವಿಜಯಮ್ಮ, ‘ದೊರೆಸ್ವಾಮಿಯವರ ಬದುಕು, ಚಿಂತನೆ, ಹೋರಾಟಗಳ ಚಿತ್ರಣವನ್ನು ಮುಂದಿನ ಪೀಳಿಗೆಗೆ ತಲುಪಿಸಲು ಪುಸ್ತಕವನ್ನು ವರ್ಷದೊಳಗೆ ಪ್ರಕಟಿಸಬೇಕು’ ಎಂದರು.

ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡ, ಲೇಖಕ ಶಿವಸುಂದರ್, ಸಾಮಾಜಿಕ ಕಾರ್ಯಕರ್ತರಾದ ವೆಂಕಟೇಶ್, ಅಜಯ್, ನರಸಿಂಹಮೂರ್ತಿ, ಕರ್ನಾಟಕ ಜನಾಂದೋಲನ ಸಂಘಟನೆಯ ಕೆ. ಮರಿಯಪ್ಪ, ಸಮಾಜವಾದಿ ಮುಖಂಡ ರಾಬಿನ್ ಮ್ಯಾಥ್ಯೂ, ಸೈಯದ್ ಸಿದ್ದಿಕಿ,ಜ್ಞಾನವಿಜ್ಞಾನ ಸಮಿತಿಯ ಪ್ರಭಾ ಬೆಳವಂಗಲ,ನಾಗೇಶ್ವರರಾವ್ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.