ಬೆಂಗಳೂರು: ಕವಿ ಎಚ್.ಎಸ್. ವೆಂಕಟೇಶಮೂರ್ತಿ ಅವರು ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಕನ್ನಡ ಸೇವೆ ಮುಂದಿನ ಪೀಳಿಗೆಗೆ ದಾರಿ ದೀಪವಾಗಬೇಕು. ಅವರ ಹೆಸರು ಸಾಹಿತ್ಯ ಲೋಕದಲ್ಲಿ ಚಿರಸ್ಥಾಯಿಯಾಗಿ ಉಳಿಯಬೇಕು ಎಂಬ ಉದ್ದೇಶದಿಂದ ನನ್ನ ಒಂದು ತಿಂಗಳ ವೇತನದಲ್ಲಿ ಎಚ್ಎಸ್ವಿ ಹೆಸರಿನ ದತ್ತಿನಿಧಿ ಸ್ಥಾಪಿಸಲಾಗುವುದು’ ಎಂದು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಘೋಷಿಸಿದರು.
ಸವಿಗಾನಲಹರಿ ಸುಗಮ ಸಂಗೀತ ಶಾಲೆ ಭಾನುವಾರ ಆಯೋಜಿಸಿದ್ದ ಎಚ್.ಎಸ್. ವೆಂಕಟೇಶಮೂರ್ತಿ ಅವರಿಗೆ ಗೀತ ನಮನ ಮತ್ತು ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸವಿಗಾನಲಹರಿ ಸುಗಮಸಂಗೀತ ಶಾಲೆ ಪ್ರತಿವರ್ಷ ಎಚ್ಎಸ್ವಿ ಅವರ ದತ್ತಿನಿಧಿಯ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸುವ ಮೂಲಕ ಯುವ ಸಾಹಿತಿಗಳು, ಗಾಯಕರು ಹಾಗೂ ಕಲಾವಿದರನ್ನು ಪ್ರೋತ್ಸಾಹಿಸಬೇಕು. ಎಚ್ಎಸ್ವಿ ಅವರು ಸಾಹಿತ್ಯ ಕ್ಷೇತ್ರದ ಜೀವನದಿಯಾಗಿದ್ದರು. ಎಚ್ಎಸ್ವಿ ಸಾಹಿತ್ಯದಲ್ಲಿ ಜಾನಪದದ ಮೆರಗು, ಹಳ್ಳಿಯ ಸೊಗಡಿದೆ’ ಎಂದು ಸ್ಮರಿಸಿದರು.
ಇದೇ ಸಂದರ್ಭದಲ್ಲಿ ಮಂಗಳಾ ರವಿ, ರಾಘವೇಂದ್ರ ಬೀಜಾಡಿ, ವರ್ಷಾ ಸುರೇಶ್, ವೆಂಕಟೇಶಮೂರ್ತಿ ಶಿರೂರ, ರವಿ ಕೃಷ್ಣಮೂರ್ತಿ, ತನ್ವಿ ಡಿ. ಗೌಡ ಮತ್ತು ಸವಿಗಾನಲಹರಿ ಸುಗಮಸಂಗೀತ ಶಾಲೆಯ ವಿದ್ಯಾರ್ಥಿಗಳು ಎಚ್.ಎಸ್.ವೆಂಕಟೇಶಮೂರ್ತಿ ಅವರ ವಿರಚಿತ ಗೀತೆಗಳ ಗಾಯನ ಪ್ರಸ್ತುತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.