ಬೆಂಗಳೂರು: ‘ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಹಸಿವಿನ ಪ್ರಮಾಣ ಹೆಚ್ಚಾಗಿದೆ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಶುಕ್ರವಾರ ಹೇಳಿದರು.
ಕೃಷಿ ಮೇಳದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು, ‘ಜಾಗತಿಕ ಹಸಿವಿನ ಸೂಚ್ಯಂಕ 2015ರ ವರದಿಯ ಪ್ರಕಾರ ಹಸಿವಿನ ಪ್ರಮಾಣ ಕಡಿಮೆ ಇರುವ ಪಟ್ಟಿಯಲ್ಲಿ ಭಾರತ 93ನೇ ಸ್ಥಾನದಲ್ಲಿತ್ತು. ಈಗ 102ನೇ ಸ್ಥಾನಕ್ಕೆ ಕುಸಿದಿದೆ’ ಎಂದರು.
‘ಇದರ ಅರ್ಥ ದೇಶದಲ್ಲಿ ಹಸಿವಿನಿಂದ ಬಳಲುತ್ತಿರುವ ಜನರ ಸಂಖ್ಯೆ ಹೆಚ್ಚಾಗಿದೆ. ಹಸಿವುಮುಕ್ತ ದೇಶವನ್ನಾಗಿಸಲು ಏನು ಮಾಡಬೇಕು ಎಂಬುದರ ಬಗ್ಗೆ ಸರ್ಕಾರ ಮತ್ತು ಕೃಷಿ ತಜ್ಞರು ಆಲೋಚಿಸಬೇಕಿದೆ’ ಎಂದು ಅವರು ಅಭಿಪ್ರಾಯಪಟ್ಟರು.
ಕೇಂದ್ರ ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ, ‘ಉದ್ಯೋಗ ಸೃಷ್ಟಿಯಾಗುತ್ತಿಲ್ಲ ಎಂದು ಬೊಬ್ಬೆ ಹೊಡೆಯುವವರಿಗೆ ಕೃಷಿ ಕ್ಷೇತ್ರ ಮಾತ್ರ ಪರಿಹಾರ ಕೊಡಬಲ್ಲದು’ ಎಂದು ಹೇಳಿದರು. ‘ಕೃಷಿ ಕ್ಷೇತ್ರದ ಉತ್ಪಾದನಾ ವೆಚ್ಚಕ್ಕೆ ಎರಡು ಪಟ್ಟು ಆದಾಯ ಸಿಗುವಂತೆ ಆಗಬೇಕು ಎಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಾಕಷ್ಟು ಪ್ರಯತ್ನಿಸುತ್ತಿದೆ’ ಎಂದರು.
₹80 ಲಕ್ಷ ವಹಿವಾಟು
‘ಕೃಷಿ ಮೇಳದಲ್ಲಿ ಯಂತ್ರೋಪಕರಣಗಳನ್ನು ರೈತರು ಮುಗಿಬಿದ್ದು ಖರೀದಿಸುತ್ತಿದ್ದು, ಎರಡು ದಿನಗಳಲ್ಲಿ ₹80 ಲಕ್ಷ ವಹಿವಾಟು ನಡೆದಿದೆ’ ಎಂದು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಸ್.ರಾಜೇಂದ್ರ ಪ್ರಸಾದ್ ಹೇಳಿದರು.
ಮೇಳದಲ್ಲಿ ರೈತರಿಗೆ ಅಗತ್ಯ ಇರುವ ಸಾಕಷ್ಟು ಸುಧಾರಿತ ಯಂತ್ರಗಳನ್ನು ಪ್ರದರ್ಶಿಸಲಾಗಿದೆ. ರಾಜ್ಯದ ವಿವಿಧೆಡೆಯಿಂದ ರೈತರು ಮೇಳವನ್ನು ನೋಡಲು ಬರುತ್ತಿದ್ದಾರೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.