ಬೆಂಗಳೂರು: ಶ್ವಾನಗಳಿಗೆ ಲಸಿಕೆ ಹಾಕಿಸಲಾಗಿದೆ ಎಂಬ ಪ್ರಮಾಣಪತ್ರ ತಂದಲ್ಲಿ ಮಾತ್ರ ಅವುಗಳಿಗೆ ಕಬ್ಬನ್ ಉದ್ಯಾನಕ್ಕೆ ಪ್ರವೇಶ ನೀಡುವ ನಿಯಮವನ್ನು ತೋಟಗಾರಿಕೆ ಇಲಾಖೆ ಜಾರಿ ಮಾಡಿದೆ.
ಉದ್ಯಾನಕ್ಕೆ ಬೆಳಿಗ್ಗೆ ಹಾಗೂ ಸಂಜೆ ವಾಯುವಿಹಾರಕ್ಕೆ ಬರುವವರು ತಮ್ಮೊಟ್ಟಿಗೆ ಶ್ವಾನಗಳನ್ನೂ ಕರೆತರುತ್ತಾರೆ. ಇದು ಇತರರಿಗೆ ಸಮಸ್ಯೆಯಾಗುತ್ತಿದೆ. ನಾಯಿಗಳು ಕಚ್ಚಬಹುದು ಎಂಬ ಭೀತಿಯಲ್ಲಿ ಉದ್ಯಾನದಲ್ಲಿ ಸಂಚರಿಸಬೇಕಾಗಿದೆ ಎಂದು ಕೆಲವರಿಂದ ದೂರು ಬಂದಿರುವುದರಿಂದ ಇಲಾಖೆ ಈ ನಿರ್ಧಾರ ಕೈಗೊಂಡಿದೆ.
ಎಲ್ಲ ಶ್ವಾನಗಳಿಗೂ ಕಡ್ಡಾಯವಾಗಿ ಮುಖಗವಸು ಹಾಕಬೇಕು. ಮಾಲೀಕರು ಶ್ವಾನಗಳನ್ನು ತಮ್ಮ ನಿಯಂತ್ರಣದಲ್ಲಿ ಇಡಬೇಕು. ಶ್ವಾನದೊಂದಿಗೆ ಆರೋಗ್ಯ ಪ್ರಮಾಣಪತ್ರ ಕಡ್ಡಾಯ ಎಂಬ ಷರತ್ತು ವಿಧಿಸಿರುವ ಫಲಕಗಳನ್ನು ಇಲಾಖೆ ಉದ್ಯಾನದಲ್ಲಿ ಅಳವಡಿಸಿದೆ. ಉದ್ಯಾನದಲ್ಲಿ ಸಾಕು ನಾಯಿಗಳು ವಿಸರ್ಜಿಸುವ ಮಲ-ಮೂತ್ರದಿಂದಲೂ ಜನರಿಗೆ ಕಿರಿಕಿರಿಯಾಗುತ್ತಿದ್ದು, ಇದನ್ನು ಮಾಲೀಕರೇ ಸ್ವಚ್ಛಗೊಳಿಸಬೇಕು. ನಿಯಮ ಉಲ್ಲಂಘಿಸಿದರೆ ದಂಡ ವಿಧಿಸುವುದಾಗಿ ಎಚ್ಚರಿಕೆಯೂ ನೀಡಲಾಗಿದೆ.
'ಸಾಕು ನಾಯಿಗಳನ್ನು ಉದ್ಯಾನಕ್ಕೆ ಕರೆತರುವವರಿಗೆ ಈ ಹಿಂದೆಯೇ ಹಲವು ಷರತ್ತುಗಳನ್ನು ವಿಧಿಸಲಾಗಿತ್ತು. ಅದು ಜನರಿಗೆ ತಿಳಿಯುವಂತೆ ಈಗ ದೊಡ್ಡ ಫಲಕಗಳಲ್ಲಿ ಬರೆಸಲಾಗಿದೆ. ಇದು ಹೊಸದಾಗಿ ರೂಪಿಸಿರುವ ನಿಯಮಗಳಲ್ಲ' ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಜೆ.ಗುಣವಂತ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.