ಹೆಸರಘಟ್ಟ: ‘ಶಿವಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಿಂಗರಾಜಪುರ ಗ್ರಾಮದ ಗೋಮಾಳ ಜಾಗವನ್ನು ಅಕ್ರಮವಾಗಿ ಮಂಜೂರು ಮಾಡಲಾಗಿದೆ’ ಎಂದು ಆರೋಪಿಸಿ ಪ್ರೊ.ನಂಜುಂಡಸ್ವಾಮಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
‘ಗ್ರಾಮದ ಸರ್ವೇ ನಂ. 5ರಲ್ಲಿ ಇರುವ 8 ಎಕರೆ ಗೋಮಾಳ ಜಾಗವನ್ನು ನಕಲಿ ದಾಖಲೆ ಸೃಷ್ಟಿಸಿ ಭೂಗಳ್ಳರು ಲಪಟಾಯಿಸುವಕೆಲಸ ಮಾಡುತ್ತಿದ್ದಾರೆ. ಪ್ರಭಾವಿ ರಾಜಕಾರಣಿಗಳು ಭೂಗಳ್ಳರಿಗೆ ಬೆಂಬಲ ನೀಡಿ ರೈತರಿಗೆ ಅನುಕೂಲವಾದ ಜಾಗವನ್ನು ಕಸಿದುಕೊಳ್ಳುವ ಪ್ರಯತ್ನ ನಡೆಸಿದ್ದಾರೆ’ ಎಂದುಸಂಘದ ರಾಜ್ಯ ಘಟಕದ ಅಧ್ಯಕ್ಷ ಹರಳೂರು ಮಂಜೇಗೌಡ ಆರೋಪಿಸಿದರು.
‘ಯಲಹಂಕದಲ್ಲಿರುವ ಸರ್ಕಾರಿ ಅಧಿಕಾರಿಗಳು ರಾಜಕಾರಣಿಗಳ ಕೈಗೊಂಬೆಗಳಾಗಿದ್ದಾರೆ. ರೈತರಿಗೆ ಅಗತ್ಯ ದಾಖಲೆಗಳನ್ನು ನೀಡದೆ ಸತಾಯಿಸುತ್ತಿದ್ದಾರೆ. ಅಕ್ರಮವಾಗಿ ಮಂಜೂರಾದ ಭೂಮಿಯನ್ನು ಉಳಿಸಿಕೊಳ್ಳುವ ಸಲುವಾಗಿ ಲೌಕ್ಡೌನ್ ಮುಗಿದ ನಂತರ ಲಿಂಗರಾಜಪುರ ಗ್ರಾಮದಿಂದ ಯಲಹಂಕ ಮಿನಿ ವಿಧಾನಸೌಧವರೆಗೂ ಪಾದಯಾತ್ರೆ ಕೈಗೊಂಡು ಧರಣಿ ಮಾಡುತ್ತೇವೆ’ ಎಂದು ತಿಳಿಸಿದರು.
‘ಹತ್ತಾರು ವರ್ಷಗಳ ಹಿಂದೆ ಮಂಜೂರಾದ ಆಶ್ರಯ ಮನೆಗಳಿಗೆ ಪಹಣಿ ಬಂದಿಲ್ಲ. ಆದರೆ ಐದಾರು ತಿಂಗಳ ಹಿಂದೆ ಅಕ್ರಮವಾಗಿ ಮಂಜೂರಾದ ಭೂಮಿಗೆ ಪಹಣಿ ಬಂದಿದೆ. ದುಡ್ಡು ಕೊಟ್ಟರೆ ಅಧಿಕಾರಿಗಳು ಎಂಥ ಕೆಲಸವನ್ನು ಮಾಡಲೂ ಹಿಂದೇಟು ಹಾಕುವುದಿಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ’ ಎಂದು ಯಲಹಂಕ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ದೂರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.