ಬೆಂಗಳೂರು: ಕಳೆದ ಮೂರು ವರ್ಷಗಳಅವಧಿಯಲ್ಲಿ ರಾಜ್ಯದಾದ್ಯಂತ ಅಕ್ರಮವಾಗಿ ನೆಲೆಸಿರುವ ವಲಸಿಗರ ವಿರುದ್ಧ 103 ಪ್ರಕರಣಗಳನ್ನು ದಾಖಲಿಸಲಾಗಿದೆ. ಒಟ್ಟು 270 ವಿದೇಶಿಯರನ್ನು ಬಂಧಿಸಲಾಗಿದೆ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್ಗೆ ತಿಳಿಸಿದೆ.
ಈ ಕುರಿತಂತೆ ವಕೀಲ ಕೆ.ಬಿ. ವಿಜಯಕುಮಾರ್ ಹಾಗೂ ‘ಭಾರತ್ ಪುನರುತ್ಥಾನ್ ಟ್ರಸ್ಟ್’ ಸಲ್ಲಿಸಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್. ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಸರ್ಕಾರದ ಪರ ವಕೀಲ ಬಿ.ವಿ. ಕೃಷ್ಣ, ‘ಅಕ್ರಮ ವಲಸಿಗರು ಅಥವಾ ಅವಧಿ ಮೀರಿ ವಾಸ ಮಾಡುತ್ತಿರುವ ವಿದೇಶಿಯರನ್ನು ಗಡಿಪಾರು ಮಾಡಲು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಪ್ರಾಧಿಕಾರಗಳ ಜೊತೆ ಸಮನ್ವಯತೆ ಸಾಧಿಸಿ ಕೆಲಸ ಮಾಡಲಾಗುತ್ತಿದೆ’ ಎಂದು ತಿಳಿಸಿದರು. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆಯನ್ನು ಜನವರಿ 22ಕ್ಕೆ ಮುಂದೂಡಿದೆ.
ಎಲ್ಲೆಲ್ಲಿ ಎಷ್ಟು?: ಕಳೆದ ಮೂರು ವರ್ಷಗಳಲ್ಲಿ ಬೆಂಗಳೂರು ನಗರದಲ್ಲಿ 84 ಪ್ರಕರಣಗಳನ್ನು ದಾಖಲಿಸಿ 178 ವಿದೇಶಿಯವರನ್ನು ಬಂಧಿಸಲಾಗಿದೆ. ಮೈಸೂರಿನಲ್ಲಿ 2 ಪ್ರಕರಣ, ಇಬ್ಬರ ಬಂಧನ. ಮಂಗಳೂರಿನಲ್ಲಿ 1 ಪ್ರಕರಣ, ಒಬ್ಬನ ಬಂಧನ. ಬೆಳಗಾವಿಯಲ್ಲಿ 2 ಪ್ರಕರಣ, 12 ಬಂಧನ. ಬೆಂಗಳೂರು ಜಿಲ್ಲೆಯಲ್ಲಿ 6 ಪ್ರಕರಣ 23ಬಂಧನ. ಕೆಜಿಎಫ್ನಲ್ಲಿ 1 ಪ್ರಕರಣ, 1 ಬಂಧನ, ಕೊಡಗು 1 ಪ್ರಕರಣ 1 ಬಂಧನ, ವಿಜಯಪುರ 1 ಪ್ರಕರಣ 33 ಬಂಧನ. ದಾವಣಗೆರೆ 1 ಪ್ರಕರಣ 1 ಬಂಧನ. ಶಿವಮೊಗ್ಗ 3 ಪ್ರಕರಣ 3 ಬಂಧನ ಹಾಗೂ ಮಂಗಳೂರಿನಲ್ಲಿ 1 ಪ್ರಕರಣದಲ್ಲಿ 14 ಮಂದಿ ವಿದೇಶಿಯರನ್ನು ಬಂಧಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.