ADVERTISEMENT

ಕಾರ್ಮಿಕರಿಗೆ ಕಾನೂನು ನೆರವಿನ ಸಹಾಯವಾಣಿ

​ಪ್ರಜಾವಾಣಿ ವಾರ್ತೆ
Published 16 ಜುಲೈ 2021, 20:32 IST
Last Updated 16 ಜುಲೈ 2021, 20:32 IST

ಬೆಂಗಳೂರು: ಅಸಂಘಟಿತ ಕಾರ್ಮಿಕರಿಗಾಗಿ ಮಧ್ಯಸ್ಥಿಕೆ ಮತ್ತು ಕಾನೂನು ನೆರವು ಒದಗಿಸಲು ವರ್ಕಿಂಗ್‌ ಪೀಪಲ್ಸ್‌ ಚಾರ್ಟರ್‌ (ಡಬ್ಲ್ಯುಪಿಸಿ) ಸಂಘಟನೆಯು ‘ಭಾರತ ಕಾರ್ಮಿಕವಾಣಿ’ ಎಂಬ ಸಹಾಯವಾಣಿಯನ್ನು ಗುರುವಾರದಿಂದ ಆರಂಭಿಸಿದೆ.

ಆಜೀವಿಕಾ ಬ್ಯೂರೊದ ಸಹಯೋಗದೊಂದಿಗೆ 18008339020 ಸಹಾಯವಾಣಿಯು ಕಾರ್ಯನಿರ್ವಹಿಸಲಿದ್ದು, ದೇಶದಲ್ಲಿರುವ ಅಸಂಘಟಿತ ವಲಯದ ಎಲ್ಲ ಕಾರ್ಮಿಕರ ಅಗತ್ಯ ನೆರವಿಗೆ ಸ್ಪಂದಿಸಲಿದೆ. ಅನಿಶ್ಚಿತ ಉದ್ಯೋಗ, ಅಸುರಕ್ಷಿತ ಸ್ಥಳಗಳಲ್ಲಿ ಕೆಲಸದ ಅಭದ್ರತೆ ಮತ್ತು ಅನಿಯಮಿತ ದುಡಿಮೆ, ಕಡಿಮೆ ಸಂಬಳ ಹಾಗೂ ರಕ್ಷಣೆ ಇಲ್ಲದಿರುವ ಸ್ಥಳಗಳಲ್ಲಿ ದುಡಿಯುವುದು ಮುಂತಾದ ಸಮಸ್ಯೆ ಮತ್ತು ದೂರುಗಳಿಗೆ ದೂರವಾಣಿ ಮೂಲಕ ಸ್ಪಂದಿಸಲಾಗುತ್ತದೆ ಎಂದು ಡಬ್ಲ್ಯುಪಿಸಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಕೆಲಸಕ್ಕೆ ಸಂಬಂಧಪಟ್ಟಂತೆ ನಡೆಯುವ ವಂಚನೆಯ ಬಗ್ಗೆ ಅಂದರೆ, ಸಂಬಳದಲ್ಲಿ ಮೋಸ, ಜೀತ ಪದ್ಧತಿ, ದೈಹಿಕ ಹಿಂಸೆ, ನಿಂದನೆ, ಅಪಾಯಕಾರಿ ಕೆಲಸದ ಸ್ಥಳಗಳಲ್ಲಿ ಸಂಭವಿಸುವ ಅಪಘಾತಗಳಿಗೆ ಕೊಡಬೇಕಾದ ಪರಿಹಾರ ಧನ ಕೊಡದೇ ಇರುವುದು, ಕೋವಿಡ್ ಪಿಡುಗು ಹಾಗೂ ಲಾಕ್‌ಡೌನ್‌ನಂತಹ ಸಂಕಷ್ಟದ ಸಮಯದಲ್ಲಿ ಅಗತ್ಯ ಸೇವೆಗಳನ್ನು ಪಡೆದುಕೊಳ್ಳಲು ಕಷ್ಟವಾಗಿದ್ದವರು ಈ ಸಹಾಯವಾಣಿ ಸಂಪರ್ಕಿಸಿದರೆ ಅವರಿಗೆ ಕಾನೂನು ನೆರವು ಒದಗಿಸಲಾಗುವುದು ಎಂದು ಸಂಘಟನೆ ಹೇಳಿದೆ.

ADVERTISEMENT

ರಾಜ್ಯದಿಂದ ಸಿಗುವ ಸಾಮಾಜಿಕ ಭದ್ರತೆಯ ಯೋಜನೆಗಳು ಮತ್ತು ಇವುಗಳನ್ನು ಪಡೆದುಕೊಳ್ಳುವ ವಿಧಾನಗಳ ಬಗೆಗಿನ ಮಾಹಿತಿಯನ್ನೂ ಸಹಾಯವಾಣಿಯ ಮೂಲಕ ಕಾರ್ಮಿಕರಿಗೆ ನೀಡಲಾಗುತ್ತದೆ ಎಂದೂ ಅದು ಹೇಳಿದೆ.

ಸಹಾಯವಾಣಿಯ ರಾಜ್ಯ ಕಚೇರಿಯ ಸಂಪರ್ಕಕ್ಕೆ– 7204940724.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.