ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎಎಲ್) ಇಂಡಿಗೊ ವಿಮಾನ ಸಂಸ್ಥೆಯ ಕಂಪ್ಯೂಟರ್ ಸರ್ವರ್ ಕೈಕೊಟ್ಟಿದ್ದರಿಂದ ನೂರಾರು ಪ್ರಯಾಣಿಕರು ಪರದಾಡಿದರು.
ಸೋಮವಾರ ಬೆಳಗಿನ ಜಾವ 4.29ರಿಂದ 5.07 ರವರೆಗೆ ತಾಂತ್ರಿಕ ಕಾರಣಕ್ಕೆ ಸರ್ವರ್ ಕೈಕೊಟ್ಟಿದ್ದರಿಂದ ಬೆಂಗಳೂರಿನಿಂದ ಹೊರಡಬೇಕಾಗಿದ್ದ ವಿಮಾನಗಳು ಮಾತ್ರವಲ್ಲ, ಬೇರೆ ವಿಮಾನ ನಿಲ್ದಾಣಗಳಿಂದ ಹೊರಡಬೇಕಾದ ವಿಮಾನಗಳು ವಿಳಂಬವಾಗಿ ಹಾರಾಟ ನಡೆಸಿದವು.
ಕೆಟ್ಟಿದ್ದ ಸರ್ವರ್ ಅನ್ನು ಸರಿಪಡಿಸಿವಿಮಾನ ಹಾರಾಟವನ್ನು ಆರಂಭಿಸಲಾಯಿತು. ಪ್ರಯಾಣಿಕರಿಗೆ ಆದ ತೊಂದರೆಗಾಗಿ ವಿಷಾದಿಸುವುದಾಗಿ ಕಂಪನಿ ಅಧಿಕೃತ ಪ್ರಕಟಣೆ ಹೇಳಿದೆ.
ವಿಮಾನ ನಿಲ್ದಾಣಗಳ ಭದ್ರತೆ ಹೆಚ್ಚಿಸಿರುವುದರಿಂದ ಮೊದಲೇ ತೊಂದರೆ ಅನುಭವಿಸುತ್ತಿರುವ ಪ್ರಯಾಣಿಕರು ಸರ್ವರ್ ಕೈಕೊಟ್ಟ ಕಾರಣಕ್ಕೆ ಇನ್ನಷ್ಟು ಕಿರಿಕಿರಿ ಅನುಭವಿಸಿದರು. ಇದರಿಂದಾಗಿ ಬೆಂಗಳೂರು, ಪುಣೆ, ಮುಂಬೈ ಹೈದರಾಬಾದ್, ಚೆನ್ನೈಗಳಲ್ಲಿ ಪ್ರಯಾ
ಣಿಕರ ನಿರ್ಗಮನದ ಕೌಂಟರ್ಗಳಲ್ಲಿ ಉದ್ದುದ್ದ ಸಾಲು ಕಂಡುಬಂತು.
ಸಮಸ್ಯೆಯ ತೀವ್ರತೆ ಅರ್ಥ ಮಾಡಿಕೊಂಡ ಕಂಪನಿ ಸಿಬ್ಬಂದಿ ಬೋರ್ಡಿಂಗ್ ಪಾಸ್ಗಳನ್ನು ಬರೆದು ವಿತರಿಸಿದರಾದರೂ ಈ ಪ್ರಕ್ರಿಯೆಯೂ ವಿಳಂಬವಾಯಿತು ಎಂದು ಪ್ರಯಾಣಿಕರು ದೂರಿದರು. ಸರ್ವರ್ ಕೆಲಸ ಮಾಡದ್ದರಿಂದ ಅತೃಪ್ತರಾದ ಪ್ರಯಾಣಿಕರು ಟ್ವಿಟರ್, ಫೇಸ್ಬುಕ್ಗಳಲ್ಲಿ ತಮ್ಮ ಅಸಹನೆ ಹೊರ ಹಾಕಿದರು.
ದೀಪೇಶ್ ಅಗರವಾಲ್ ಹಾಗೂ ಶಿವಕುಮಾರ್ ಆರ್. ಎಂಬುವರು ಟ್ವೀಟ್ ಮಾಡಿ, ‘ಇಂಡಿಗೊ ನಿರ್ಗಮನ ಕೌಂಟರ್ಗಳ ಮುಂದೆ ಅಕ್ಷರಶಃ ಭಾರಿ ಗೊಂದಲ ಸೃಷ್ಟಿಯಾಯಿತು. ಸುಮಾರು ಎರಡು ಗಂಟೆಗಳ ಕಾಲ ಪ್ರಯಾಣಿಕರು ಪರದಾಡಿ
ದರು’ ಎಂದಿದ್ದಾರೆ.
ಪ್ರತಿನಿತ್ಯ 1,300 ಇಂಡಿಗೊ ವಿಮಾನಗಳು ಹಾರಾಡುತ್ತವೆ. ಏನೇ ಏರುಪೇರಾದರೂ ಅವುಗಳ ಪರಿಣಾಮ ಉಳಿದ ವಿಮಾನಗಳ ಮೇಲೂ ಆಗುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.