ಬೆಂಗಳೂರು:‘ರಾಜ್ಯದ ಕೈಗಾರಿಕೆಗಳ ಅಭಿವೃದ್ಧಿಗೆ ಕೈಗಾರಿಕಾ ನೀತಿ ಅಥವಾ ಕರ್ನಾಟಕ ನೀತಿ 2019-23ರ ಕರಡು ರೂಪಿಸಲಾಗಿದ್ದು, ಶೀಘ್ರದಲ್ಲೇ ಜಾರಿಗೆ ತರಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ನಗರದಲ್ಲಿ ಶನಿವಾರಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೆಲಮಂಗಲ ಹಾಗೂ ಹರಿಹರ ವಸಾಹತುಗಳ ಸಣ್ಣ ಉದ್ದಿಮೆದಾರರಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದರು.
‘ಸಣ್ಣ ಕೈಗಾರಿಕೆಗಳು ಕಳೆದ ಸಾಲಿನಲ್ಲಿ ಪಾವತಿಸಬೇಕಾಗಿರುವ ಆಸ್ತಿ ತೆರಿಗೆ ಮೇಲಿನ ಬಡ್ಡಿದರವನ್ನು ಮನ್ನಾ ಮಾಡುವುದಾಗಿ ಸರ್ಕಾರ ಈಗಾಗಲೇ ಘೋಷಿಸಿದೆ. ಆದರೆ, ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದೆ. ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ಬಡ್ಡಿ ಮನ್ನಾಗೆ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಹೇಳಿದರು.
‘ಸಣ್ಣ ಕೈಗಾರಿಕೆಗಳು ವಿದ್ಯುತ್ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕಾಗಿದ್ದಲ್ಲಿ ಎಸ್ಕಾಂಗಳಿಂದ ಸ್ವಾಧೀನಾನುಭವ ಪತ್ರ ಪಡೆದುಕೊಳ್ಳಬೇಕು. ಹಲವು ಸಣ್ಣ ಕೈಗಾರಿಕೆಗಳು ಈ ಪ್ರಮಾಣಪತ್ರ ಹೊಂದಿರದ ಕಾರಣ, ಕೈಗಾರಿಕೆಗಳ ವಿಸ್ತರಣೆಗೆ ಅಡಚಣೆಯಾಗಿದೆ. ಸರ್ಕಾರದ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು’ ಎಂದರು.
ನೆಲಮಂಗಲದ 240 ಮತ್ತು ಹರಿಹರದ 78 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು.
ಪೋರ್ಟಲ್– ಕೈಟ್ ಚಿಹ್ನೆ ಬಿಡುಗಡೆ:ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕಾ ಉದ್ಯಮಗಳಲ್ಲಿನ ಕಚ್ಚಾ ವಸ್ತುಗಳ ಮಾರಾಟ ಮತ್ತು ವಿನಿಮಯ ಮಾಡಿಕೊಳ್ಳುವ ಉದ್ದೇಶದಿಂದ ಕಾಸಿಯಾ ರೂಪಿಸಿದ kassia.msmemall.com ವೆಬ್ ಪೋರ್ಟಲ್ ಅನಾವರಣಗೊಳಿಸಲಾಯಿತು. ಈ ಪೋರ್ಟಲ್ ಮೂಲಕವೇ ವಹಿವಾಟು ನಡೆಸಿದರೆ, ಉದ್ಯಮಗಳಲ್ಲಿನ ಬಳಕೆ ಮಾಡಿ ಉಳಿದಿರುವ ವಸ್ತುಗಳು ಕಡಿಮೆ ಬೆಲೆಗೆ ಸಿಗಲಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.