ADVERTISEMENT

ಜೂಜಾಟ: ಇನ್‌ಸ್ಪೆಕ್ಟರ್, ಹೆಡ್ ಕಾನ್‌ಸ್ಟೆಬಲ್ ಅಮಾನತು

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2020, 20:58 IST
Last Updated 12 ಅಕ್ಟೋಬರ್ 2020, 20:58 IST
ಅಶ್ವತ್ಥ್ ನಾರಾಯಣ
ಅಶ್ವತ್ಥ್ ನಾರಾಯಣ   

ಬೆಂಗಳೂರು: ಹೋಟೆಲೊಂದರಲ್ಲಿ ನಡೆಯುತ್ತಿದ್ದ ಜೂಜಾಟದ ವಿರುದ್ಧ ಕ್ರಮ ಕೈಗೊಳ್ಳದೇ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಮಹದೇವಪುರ ಠಾಣೆ ಇನ್‌ಸ್ಪೆಕ್ಟರ್ ಅಶ್ವತ್ಥನಾರಾಯಣ ಸ್ವಾಮಿ ಹಾಗೂ ಹೆಡ್ ಕಾನ್‌ಸ್ಟೆಬಲ್ ಜಯಕಿರಣ್‌ ಅವರನ್ನು ಅಮಾನತು ಮಾಡಲಾಗಿದೆ.

ಈ ಸಂಬಂಧ ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಸೋಮವಾರ ಆದೇಶ ಹೊರಡಿಸಿದ್ದಾರೆ.

‘ಮಹದೇವಪುರ ಠಾಣೆ ವ್ಯಾಪ್ತಿಯಲ್ಲಿರುವ ದೊಡ್ಡನೆಕ್ಕುಂದಿಯ ‘ಬೆಂಗಳೂರು ಇನ್‌’ ಹೋಟೆಲ್‌ನಲ್ಲಿ ಜೂಜಾಟ ನಡೆಯುತ್ತಿತ್ತು. ದಾಳಿ ಮಾಡಿದ್ದ ಸಿಸಿಬಿ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ. ತಮ್ಮ ಠಾಣೆ ವ್ಯಾಪ್ತಿಯಲ್ಲಿ ಜೂಜಾಟ ನಡೆಯುತ್ತಿದ್ದರೂ ಮಾಹಿತಿ ಸಂಗ್ರಹಿಸದೇ ಇನ್‌ಸ್ಪೆಕ್ಟರ್ ಹಾಗೂ ಹೆಡ್‌ ಕಾನ್‌ಸ್ಟೆಬಲ್ ಕೃತ್ಯಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಅವರಿಬ್ಬರು ಕರ್ತವ್ಯ ಲೋಪ, ನಿರ್ಲಕ್ಷ್ಯ ಹಾಗೂ ದುರ್ನಡತೆ ಪ್ರದರ್ಶಿಸಿರುವುದು ಪ್ರಾಥಮಿಕ ತನಿಖೆಯಿಂದ ಕಂಡುಬಂದಿದೆ. ಇಲಾಖೆ ಶಿಸ್ತು ಕ್ರಮ ಬಾಕಿ ಇರಿಸಿ ಇಬ್ಬರನ್ನೂ ಸೇವೆಯಿಂದ ಅಮಾನತುಗೊಳಿಸಲಾಗಿದೆ’ ಎಂದು ಕಮಲ್ ಪಂತ್ ಆದೇಶದಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಕರಣದ ವಿವರ: ಆಂಧ್ರಪ್ರದೇಶದ ಕಡಪಾಜಿಲ್ಲೆಯ ಶಶಿ ಎಂಬಾತ, ಹೋಟೆಲ್ ನಡೆಸುತ್ತಿದ್ದ. ಹೋಟೆಲ್‌ನ ಸಭಾಂಗಣದಲ್ಲಿ ಜೂಜಾಟಕ್ಕೆ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದ. ಪ್ರತಿಯೊಬ್ಬರಿಂದ ₹ 5 ಸಾವಿರ ಪ್ರವೇಶ ಶುಲ್ಕ ಪಡೆಯುತ್ತಿದ್ದ. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಸಿಸಿಬಿ ಡಿಸಿಪಿ ಕೆ.ಪಿ. ರವಿಕುಮಾರ್ ನೇತೃತ್ವದ ತಂಡ ನ್ಯಾಯಾಲಯದ ವಾರಂಟ್ ಪಡೆದು ಭಾನುವಾರ ದಾಳಿ ಮಾಡಿತ್ತು.

ದಾಳಿ ಸಂದರ್ಭದಲ್ಲಿ ಆಂಧ್ರಪ್ರದೇಶ ಹಾಗೂ ತೆಲಂಗಾಣದ 80 ಮಂದಿಯನ್ನು ಬಂಧಿಸಲಾಗಿತ್ತು. ಐಷಾರಾಮಿ ಕಾರುಗಳಲ್ಲಿ ಹೋಟೆಲ್‌ಗೆ ಬರುತ್ತಿದ್ದ ಆರೋಪಿಗಳು, ಜೂಜಾಟವಾಡಿ ಹೋಗುತ್ತಿದ್ದರು. ದಾಳಿ ವೇಳೆ ₹ 85 ಲಕ್ಷ ನಗದು ಹಾಗೂ 87 ಗ್ರಾಂ ಚಿನ್ನಾಭರಣ ಜಪ್ತಿ ಸಹ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.