ADVERTISEMENT

ವಿದ್ಯಾರ್ಥಿಗಳಲ್ಲಿ ಅಂತರಂಗದ ಹಸಿವು ಹೆಚ್ಚಬೇಕು: ಕವಿ ದೊಡ್ಡರಂಗೇಗೌಡ

ಕವಿ ಡಾ.ದೊಡ್ಡರಂಗೇಗೌಡ ಅಭಿಮತ * ವಿವಿಧ ಲೇಖಕರ 37 ಪುಸ್ತಕಗಳು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2019, 19:40 IST
Last Updated 18 ಡಿಸೆಂಬರ್ 2019, 19:40 IST
ಕವಿ ಡಾ. ದೊಡ್ಡರಂಗೇಗೌಡ
ಕವಿ ಡಾ. ದೊಡ್ಡರಂಗೇಗೌಡ   

ಬೆಂಗಳೂರು: ‘ವಿದ್ಯಾರ್ಥಿಗಳು ಅಂತರಂಗದ ಹಸಿವನ್ನು ಹೆಚ್ಚಿಸಿಕೊಂಡು, ಸಾಹಿತ್ಯ ಕೃತಿಗಳನ್ನು ಓದುವುದನ್ನು ರೂಢಿಸಿಕೊಳ್ಳಬೇಕು’ ಎಂದುಕವಿ ಡಾ. ದೊಡ್ಡರಂಗೇಗೌಡ ತಿಳಿಸಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿಯು ನಗರದಲ್ಲಿ ಬುಧವಾರ ಆಯೋಜಿಸಿದ್ದ `ಹದಿಹರಯಕ್ಕೆ ಸಾಹಿತ್ಯ ಸುಧೆ' ಕಾರ್ಯಕ್ರಮದಲ್ಲಿ ವಿವಿಧ ಲೇಖಕರ 37 ಪುಸ್ತಕಗಳನ್ನು ಬಿಡುಗಡೆಗೊಳಿಸಿ, ಮಾತನಾಡಿದರು.

‘ದೇಹಕ್ಕೆ ಹಸಿವಾದಂತೆ ಮನಸ್ಸಿಗೂ ಆಗುತ್ತದೆ. ಹಾಗಾಗಿ ನಿರಂತರವಾದ ಅಧ್ಯಯನ ಅಗತ್ಯ. ಗ್ರಂಥಗಳಿಗೆಬದುಕನ್ನು ಮಾರ್ಪಡಿಸುವ ಶಕ್ತಿಯಿದೆ. ಸಮಾಜದ ಏಳುಬೀಳುಗಳ ಸಮಗ್ರ ಚಿತ್ರಣವನ್ನು ನಮಗೆ ಪುಸ್ತಕಗಳು ನೀಡಲಿವೆ. ಆದರೆ, ಇಂದಿನ ಯುವಜನತೆ ಮೊಬೈಲ್‌ನ ಹಿಂದೆ ಬಿದ್ದು, ಅನಗತ್ಯವಿಷಯಗಳಿಗೆ ಹೆಚ್ಚಿನ ಆಸಕ್ತಿ ತೋರುತ್ತಿದೆ. ಇದರಿಂದ ಓದಿನಲ್ಲಿ ಹಿನ್ನಡೆಯಾಗುತ್ತಿದೆ. ಮೊಬೈಲ್, ಟಿ.ವಿ ಮಾಧ್ಯಮಗಳ ಗೀಳಿನಿಂದ ಸಮಯ ಹಾಳು ಮಾಡಿಕೊಳ್ಳುವುದನ್ನು ಬಿಟ್ಟು, ಉತ್ತಮ ಕೃತಿಗಳನ್ನು ಅಧ್ಯಯನ ಮಾಡಿ ವಿದ್ಯಾರ್ಥಿ ಜೀವನವನ್ನು ಹಸನಾಗಿಸಿಕೊಳ್ಳಿ’ ಎಂದರು.

ADVERTISEMENT

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎಸ್. ರಂಗಪ್ಪ, ‘ಇಂದಿನ ಮಕ್ಕಳು ಚಂದಮಾಮ, ಜಾನಪದ ಕತೆಗಳನ್ನು ಓದುತ್ತಿಲ್ಲ. ಬದಲಿಗೆ ಪಠ್ಯಪುಸ್ತಕಕ್ಕೆ ಸೀಮಿತವಾಗಿದ್ದಾರೆ. ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಕತೆ, ಕಾದಂಬರಿ ಓದುವುದನ್ನು ರೂಢಿಸಿಕೊಳ್ಳಬೇಕು. ಐದು ವರ್ಷ ಕಳೆದರೂ ಮುಗಿಯದ ಧಾರಾವಾಹಿಗಳಿಗೆ ಸಮಯ ವ್ಯರ್ಥಮಾಡದೆ, ನಿತ್ಯ ಅರ್ಧ ತಾಸೂ ಪುಸ್ತಕ ಓದಿದರೂ 15 ದಿನಗಳಲ್ಲಿ ಒಂದು ಕಾದಂಬರಿ ಮುಗಿಸಬಹುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.