ADVERTISEMENT

ಈಶಾ ಫೌಂಡೇಶನ್‌ನಿಂದ ಚಿಕ್ಕಬಳ್ಳಾಪುರದಲ್ಲಿ ಆವಲಗುರ್ಕಿ ಬಳಿ 150 ಎಕರೆ ಭೂಮಿ ಖರೀದಿ

‘ಸದ್ಗುರು’ ಜಾಗತಿಕ ಅಧ್ಯಾತ್ಮ ಕೇಂದ್ರ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2020, 20:07 IST
Last Updated 26 ಫೆಬ್ರುವರಿ 2020, 20:07 IST
ಸದ್ಗುರು ಜಗ್ಗಿ ವಾಸುದೇವ್‌
ಸದ್ಗುರು ಜಗ್ಗಿ ವಾಸುದೇವ್‌    

ಚಿಕ್ಕಬಳ್ಳಾಪುರ: ಕೊಯಮತ್ತೂರಿನ ಈಶಾ ಫೌಂಡೇಷನ್‌ನ ಸದ್ಗುರು ಜಗ್ಗಿ ವಾಸುದೇವ್‌ ಅವರು ಚಿಕ್ಕಬಳ್ಳಾಪುರ ತಾಲ್ಲೂಕಿನ ಆವಲಗುರ್ಕಿ ಬಳಿ ಜಾಗತಿಕ ಅಧ್ಯಾತ್ಮ ಕೇಂದ್ರ ಸ್ಥಾಪಿಸಲು ಮುಂದಾಗಿದ್ದು, ಅದಕ್ಕಾಗಿ ಸುಮಾರು 150 ಎಕರೆ ಭೂಮಿ ಖರೀದಿಸಿದ್ದಾರೆ.

ಬೆಂಗಳೂರು ಮತ್ತು ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಜಿಲ್ಲೆ ಹತ್ತಿರ ಇದೆ. ಈ ಕಾರಣದಿಂದ ಕೇಂದ್ರ ಸ್ಥಾಪಿಸಲು ಚಿಕ್ಕಬಳ್ಳಾಪುರವನ್ನು ಆಯ್ಕೆ ಮಾಡಿ
ಕೊಂಡಿದ್ದಾರೆ. ಈ ಬಗ್ಗೆ ಸ್ಥಳೀಯ ಶಾಸಕ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮತ್ತು ಜಗ್ಗಿ ವಾಸುದೇವ್‌ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಈ ಕುರಿತು ‘ಪ್ರಜಾವಾಣಿ’ ಯೊಂದಿಗೆ ಮಾತನಾಡಿದ ಸುಧಾಕರ್, ‘ಸದ್ಗುರು ಜಗ್ಗಿ ವಾಸುದೇವ್‌ ಅವರ ತಾಯಿ ಚಿಕ್ಕಬಳ್ಳಾಪುರದವರು. ನಾಲ್ಕೈದು ತಿಂಗಳ ಹಿಂದೆ ಸದ್ಗುರು ಅವರು ಬೆಂಗಳೂರಿಗೆ ಭೇಟಿ ನೀಡಿದಾಗ, ಆವಲಗುರ್ಕಿ ಬಳಿ ಜಾಗತಿಕ ಅಧ್ಯಾತ್ಮ ಕೇಂದ್ರ ಮತ್ತು ನಂದಿ ಬೆಟ್ಟದ ತಪ್ಪಲಿನಲ್ಲಿ ಆದಿ ಯೋಗಿ ಮೂರ್ತಿ ಸ್ಥಾಪಿಸುವಂತೆ ವೈಯಕ್ತಿಕವಾಗಿ ವಿನಂತಿಸಿದ್ದೆ. ಅದಕ್ಕೆ ಅವರು ಒಪ್ಪಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘ಈ ಯೋಜನೆಗಾಗಿ ನಮ್ಮಿಂದ ಜಮೀನು ಕೇಳಿಲ್ಲ. ಫೌಂಡೇಷನ್‌ನಿಂದ ಆವಲಗುರ್ಕಿ ಬಳಿ ಜಮೀನು ಖರೀದಿ
ಸಿದ್ದಾರೆ. ನಂದಿ ಬೆಟ್ಟದ ಸುತ್ತಮುತ್ತ ಜಮೀನು ಖರೀದಿಗೆ ಹುಡುಕಾಟ ನಡೆದಿದೆ. ಇದರಿಂದಾಗಿ ನಮ್ಮ ಕ್ಷೇತ್ರದ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆಯಲಿದೆ. ಸರ್ಕಾರದಿಂದ ಅಗತ್ಯ ಮೂಲಸೌಕರ್ಯ ಒದಗಿಸುವ ಭರವಸೆ ನೀಡಿರುವೆ’ ಎಂದು ಹೇಳಿದರು.

‘ಎರಡ್ಮೂರು ತಿಂಗಳಲ್ಲಿ ಅಧ್ಯಾತ್ಮ ಕೇಂದ್ರ ನಿರ್ಮಾಣದ ಕಾಮಗಾರಿಗೆ ಚಾಲನೆ ದೊರೆಯಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.