ADVERTISEMENT

‘ಮಣ್ಣು ರಕ್ಷಿಸದಿದ್ದರೆ ವಿನಾಶ’: ಸದ್ಗುರು ಜಗ್ಗಿ ವಾಸುದೇವ್‌

ಪ್ರತಿ 5 ಸೆಕೆಂಡಿಗೆ ಮೈದಾನದಷ್ಟು ಮರುಭೂಮಿಯಾಗಿ ಪರಿವರ್ತನೆ: ಆತಂಕ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2022, 21:54 IST
Last Updated 5 ಡಿಸೆಂಬರ್ 2022, 21:54 IST
ಬೆಂಗಳೂರಿನಲ್ಲಿ ಸೋಮವಾರ ಸದ್ಗುರು ಜಗ್ಗಿ ವಾಸುದೇವ್‌ ಅವರು ಬೈಕ್‌ ರ‍್ಯಾಲಿ ನಡೆಸಿದರು.  – ಪ್ರಜಾವಾಣಿ ಚಿತ್ರ
ಬೆಂಗಳೂರಿನಲ್ಲಿ ಸೋಮವಾರ ಸದ್ಗುರು ಜಗ್ಗಿ ವಾಸುದೇವ್‌ ಅವರು ಬೈಕ್‌ ರ‍್ಯಾಲಿ ನಡೆಸಿದರು.  – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಮಣ್ಣಿನ ಫಲವತ್ತತೆ ಕುಸಿದು ಮರುಭೂಮಿಯಾಗುತ್ತಿರುವ ಈ ಸಂದರ್ಭದಲ್ಲಿ ಸರ್ಕಾರಗಳು ಸಂರಕ್ಷಣೆ ಕಾರ್ಯಕ್ಕೆ ಮುಂದಾಗಬೇಕು’ ಎಂದು ಈಶಾ ಫೌಂಡೇಷನ್‌ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್‌ ಪ್ರತಿಪಾದಿಸಿದರು.

ವಿಶ್ವ ಮಣ್ಣು ದಿನದ ಅಂಗವಾಗಿ ಸೋಮವಾರ ‘ಮಣ್ಣು ಉಳಿಸಿ’ ಅಭಿಯಾನದ ಅಂಗವಾಗಿ ಕೈಗೊಂಡಿರುವ ಯೋಜನೆಗಳು ಮತ್ತು ಪ್ರಸ್ತುತ ಪರಿಸ್ಥಿತಿ ವಿವರಿಸಿದ ಅವರು,‘ಕಳೆದ 25 ವರ್ಷಗಳಲ್ಲಿ ಶೇ 10ರಷ್ಟು ಭೂಮಿ ಮರುಭೂಮಿಯಾಗಿ ಪರಿವರ್ತನೆಗೊಂಡಿದೆ.ಪ್ರತಿ ಐದು ಸೆಕೆಂಡಿಗೆ ಒಂದುಫುಟ್‌ಬಾಲ್ ಮೈದಾನದಷ್ಟು ಜಮೀನಿನಲ್ಲಿನ ಮಣ್ಣು ಫಲವತ್ತತೆ ಕಳೆದುಕೊಂಡು ಮರುಭೂಮಿಯಾಗುತ್ತಿದೆ.ಹೀಗಾಗಿ, ಮಣ್ಣಿನ ರಕ್ಷಣೆಗೆ ಮುಂದಾಗದಿದ್ದರೆ ವಿನಾಶ ಖಂಡಿತ’ ಎಂದು ಎಚ್ಚರಿಕೆ ನೀಡಿದರು.

‘ಜನಾಂದೋಲನದಿಂದ ಮಾತ್ರಮಣ್ಣಿನ ಸಂರಕ್ಷಣೆ ಕಾರ್ಯ ಸಾಧ್ಯ. ಆಗ ಸರ್ಕಾರಗಳು ಸಹ ಮಣ್ಣು ಉಳಿಸುವ ಕಾರ್ಯಕ್ಕೆ ಮುಂದಾಗುತ್ತವೆ. ಇದುವರೆಗೆ ಕೈಗೊಂಡಅಭಿಯಾನದ ಪ್ರತಿಫಲವಾಗಿ81 ರಾಷ್ಟ್ರಗಳು ಮಣ್ಣು ಉಳಿಸಿ ಕಾರ್ಯಕ್ಕೆ ನೀತಿಗಳನ್ನು ರೂಪಿಸುವುದಾಗಿ ಘೋಷಿಸಿವೆ. ಚೀನಾ ಈಗಾಗಲೇ ಮಣ್ಣಿನ ಗುಣಮಟ್ಟ ಕುರಿತು ಸಮೀಕ್ಷೆ ಆರಂಭಿಸಿದೆ’ ಎಂದು ತಿಳಿಸಿದರು.

ADVERTISEMENT

‘ಕೈಗಾರಿಕೆಗಳ ದೃಷ್ಟಿಯಿಂದ ನೀತಿಗಳನ್ನು ರೂಪಿಸುವ ಬದಲು ಕೃಷಿ ಪರವಾದ ನೀತಿಗಳನ್ನು ರೂಪಿಸುವುದು ಅಗತ್ಯವಿದೆ. ಮಣ್ಣಿಗಿಂತ ಯಾವುದೂ ಮುಖ್ಯವಲ್ಲ. ಮಣ್ಣಿನ ಫಲವತ್ತತೆ ಕುಸಿದರೆ 27 ಸಾವಿರ ಪ್ರಬೇಧಗಳು ನಾಶವಾಗಬಹುದು.ಬಹುತೇಕ ಆರೋಗ್ಯ ಸಮಸ್ಯೆಗಳಿಗೆ ಮಣ್ಣು ಪ್ರಮುಖ ಕಾರಣವಾಗಿದೆ. ದೇಶದಲ್ಲಿ ಕೇವಲ ಶೇ 0.68 ಮಣ್ಣು ಫಲವತ್ತವಾಗಿ ಉಳಿದಿದೆ. ಈಗ ಲಭ್ಯವಿರುವ ಆಹಾರದಲ್ಲಿ ಪೌಷ್ಟಿಕಾಂಶಗಳ ಕೊರತೆ ಇದೆ. ಸಾವಯವ ಆಹಾರ ಎನ್ನುವುದು ಸಹ ಕೇವಲ ಮಾರುಕಟ್ಟೆ ವಸ್ತುವಾಗಿದೆ’ ಎಂದು ಅಭಿಪ್ರಾಯಪಟ್ಟರು.

ಇಸ್ರೊ ಮಾಜಿ ಅಧ್ಯಕ್ಷ ಕಿರಣ್ ಕುಮಾರ್ ಹಾಗೂ ಪರಿಸರವಾದಿ ರೇವತಿ ಕಾಮತ್ ಇದ್ದರು.

ಬೈಕ್‌ ರ‍್ಯಾಲಿ: ವಿಶ್ವ ಮಣ್ಣಿನ ದಿನಾಚರಣೆ ಅಂಗವಾಗಿ ಸದ್ಗುರು ಜಗ್ಗಿ ವಾಸುದೇವ್ ಅವರು ಸೋಮವಾರ ಬೈಕ್ ರ‍್ಯಾಲಿ ನಡೆಸಿದರು.

ನಗರದ ಹೆಬ್ಬಾಳದಿಂದ ವಿಠಲ್ ಮಲ್ಯ ರಸ್ತೆಯಲ್ಲಿನ ಜೆ.ಡಬ್ಲ್ಯೂ. ಮಾರಿಯಟ್‌ ಹೋಟೆಲ್‌ವರೆಗೆ ರ‍್ಯಾಲಿ ನಡೆಸಿದರು. ಸದ್ಗುರು ರ‍್ಯಾಲಿ ಸಾಗುವ ಮಾರ್ಗದಲ್ಲಿ ಕಾರ್ಯಕರ್ತರು ಮಣ್ಣು ಉಳಿಸಿ ಕುರಿತ ಭಿತ್ತಿಪತ್ರಗಳನ್ನುಪ್ರದರ್ಶಿಸಿದರು.

‘ಕಾನೂನುಬಾಹಿರ ಕಾರ್ಯ ಇಲ್ಲ’

‘ಈಶಾ ಫೌಂಡೇಷನ್‌ಕಾನೂನುಬಾಹಿರವಾಗಿ ಅಥವಾ ಕಾನೂನುಗಳನ್ನು ಮೀರಿ ಯಾವುದೇ ಕಾರ್ಯಗಳನ್ನು ಕೈಗೊಂಡಿಲ್ಲ’ ಎಂದು ಜಗ್ಗಿ ವಾಸುದೇವ್‌ ಹೇಳಿದರು.

ಈಶಾ ಫೌಂಡೇಷನ್‌ ಕೆಲವೆಡೆ ಅರಣ್ಯ ಒತ್ತುವರಿ ಮಾಡಿ, ಕಾನೂನು
ಬಾಹಿರವಾಗಿ ಕಟ್ಟಡಗಳನ್ನು ನಿರ್ಮಿಸಲಾಗಿದೆ ಎನ್ನುವ ಆರೋಪಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು,‘ಕಾನೂನುಬಾಹಿರವಾಗಿ ಯಾವು
ದಾದರೂ ಕಾರ್ಯ ಕೈಗೊಂಡಿದ್ದರೆ ಬಹಿರಂಗಪಡಿಸಿ. ಈ ಬಗ್ಗೆ ಸಂಶೋಧನೆ ಮಾಡಿ, ನನಗೆ ತಿಳಿಸಿ.ಒಂದು ವೇಳೆ ಅಂತಹ ಕೃತ್ಯಗಳು ನಡೆದಿದ್ದರೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಅದು ಸರ್ಕಾರದ ಕರ್ತವ್ಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.