ಬೆಂಗಳೂರು: ಬೃಹತ್ ಪ್ರಮಾಣದ ತೆರಿಗೆ ವಂಚಿಸಿರುವ ಶಂಕೆಯ ಮೇಲೆ ಏಟ್ರಿಯಾ ಸಮೂಹದ ವಿವಿಧ ಕಚೇರಿಗಳು ಮತ್ತು ಸ್ಥಳಗಳ ಮೇಲೆ ಗುರುವಾರ ದಾಳಿ ನಡೆಸಿದ ಆದಾಯ ತೆರಿಗೆ ಅಧಿಕಾರಿಗಳು, ಶೋಧ ನಡೆಸಿದ್ದಾರೆ.
ಆತಿಥ್ಯ (ಹೋಟೆಲ್), ಶಿಕ್ಷಣ ಸಂಸ್ಥೆಗಳು, ರಿಯಲ್ ಎಸ್ಟೇಟ್ ಮತ್ತು ವಿದ್ಯುತ್ ಉತ್ಪಾದನಾ ಕೇಂದ್ರಗಳನ್ನು ಹೊಂದಿರುವ ಏಟ್ರಿಯಾ ಸಮೂಹದ ಹಲವು ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆಯ ಕರ್ನಾಟಕ– ಗೋವಾ ವಲಯದ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸೇವಾ ವಲಯದಲ್ಲಿ ಸಕ್ರಿಯವಾಗಿರುವ ವ್ಯಕ್ತಿಯೊಬ್ಬರ ಮೇಲೂ ದಾಳಿ ನಡೆದಿದೆ. ಗುರುವಾರ ಬೆಳಿಗ್ಗೆ ಆರಂಭವಾದ ಶೋಧ ಕಾರ್ಯಾಚರಣೆ ತಡರಾತ್ರಿಯಾದರೂ ಮುಂದುವರಿದಿತ್ತು.
ವಿದ್ಯುತ್ ಉತ್ಪಾದನಾ ಘಟಕಗಳಿಗೆ ಸಂಬಂಧಿಸಿದಂತೆ ಏಟ್ರಿಯಾ ಸಮೂಹವು ಭಾರಿ ಪ್ರಮಾಣದ ತೆರಿಗೆ ವಂಚಿಸಿರುವುದು ಪ್ರಾಥಮಿಕ ಹಂತದ ತನಿಖೆ ವೇಳೆ ಪತ್ತೆಯಾಗಿದೆ. ತೆರಿಗೆ ವಂಚನೆ ಮತ್ತು ಸಮೂಹದ ಹಣಕಾಸು ವಹಿವಾಟುಗಳಿಗೆ ಸಂಬಂಧಿಸಿದ ಹಲವು ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.