ಬೆಂಗಳೂರು: ‘ಕೋವಿಡ್ ವಿರುದ್ಧದ ಹೋರಾಟಕ್ಕೆ ಇಡೀ ಮನುಕುಲವೇ ಜೊತೆಯಾಗಬೇಕು. ನಿರ್ದಿಷ್ಟವಾಗಿ ಒಬ್ಬರತ್ತ ಬೊಟ್ಟು ಮಾಡುವುದನ್ನು ಬಿಡಬೇಕು. ರೋಷ, ದುಃಖ, ಹತಾಶೆಗಳಿಂದ ಯಾವ ಪ್ರಯೋಜನವೂ ಇಲ್ಲ. ಇದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಬಹುದಷ್ಟೇ. ಹೀಗಾಗಿ ನಾವೆಲ್ಲಾ ಜವಾಬ್ದಾರಿ ಅರಿತು ಕೆಲಸ ಮಾಡಬೇಕು’ ಎಂದು ಈಶ ಫೌಂಡೇಷನ್ನ ಸಂಸ್ಥಾಪಕ ಜಗ್ಗಿ ವಾಸುದೇವ್ ತಿಳಿಸಿದರು.
ದೆಹಲಿ ಕೋವಿಡ್ ರೆಸ್ಪಾನ್ಸ್ ಟೀಂ ಮಂಗಳವಾರ ಹಮ್ಮಿಕೊಂಡಿದ್ದ ‘ಪಾಸಿಟಿವಿಟಿ ಅನ್ಲಿಮಿಟೆಡ್’ ಉಪನ್ಯಾಸ ಮಾಲಿಕೆಯಲ್ಲಿ ಅವರು ಮಾತನಾಡಿದರು.
‘ಸರ್ಕಾರ ವಿಧಿಸಿರುವ ನಿಬಂಧನೆಗಳಿಂದ ಜೀವನಶೈಲಿಗೆ ಅಲ್ಪ ತೊಡಕಾಗಿರಬಹುದು. ಈಗಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಜೀವ ರಕ್ಷಿಸಿಕೊಳ್ಳಲು ಇವು ತುಂಬಾ ಅವಶ್ಯ. ರೋಗಿಗಳ ಆರೈಕೆ ಮಾಡುವುದು ಶುಶ್ರೂಷಕಿಯರ ಕೆಲಸ ಎಂದು ಭಾವಿಸಬಾರದು. ಸೂಕ್ತ ಮುಂಜಾಗ್ರತಾ ಕ್ರಮಗಳೊಂದಿಗೆ ನಾವೂ ಕೂಡ ಆರೈಕೆ ಮಾಡಬಹುದು. ಎಲ್ಲರೂ ಆರೋಗ್ಯಕರ ಜೀವನಶೈಲಿ ಮೈಗೂಡಿಸಿಕೊಳ್ಳಬೇಕು. ಆಗಾಗ ಕಷಾಯ ಕುಡಿಯುತ್ತಿರಬೇಕು. ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸಲಿದ್ದು, ಸೋಂಕಿನಿಂದ ಪಾರಾಗಬಹುದು’ ಎಂದರು.
ಜೈನ ಮುನಿ ಪ್ರಮಾಣ್ ಸಾಗರ್ಜೀ ಮಹಾರಾಜ್ ‘ಕೋವಿಡ್ ಪ್ರಕರಣಗಳು ಏರುತ್ತಲೇ ಇದೆ. ಸಾಯುವವರ ಸಂಖ್ಯೆಯೂ ಅಧಿಕವಿದೆ. ಆಸ್ಪತ್ರೆಗಳಲ್ಲೂ ಹಾಸಿಗೆ ಸಿಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾವು ಮಾನಸಿಕವಾಗಿ ಸದೃಢರಾಗಬೇಕು. ಹಾಗಾದಾಗ ಮಾತ್ರ ಈ ಪಿಡುಗಿನ ವಿರುದ್ಧ ಜಯಿಸಲು ಸಾಧ್ಯ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.