ಬೆಂಗಳೂರು: ‘ಸಾಹಿತ್ಯ, ಸಂಸ್ಕೃತಿ ಹಾಗೂ ಶಾಸ್ತ್ರಗಳನ್ನು ಪೋಷಿಸಿ ಮುಂದಿನ ಪೀಳಿಗೆಗೆ ರವಾನಿಸಬೇಕು’ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪದ್ಮರಾಜ ಎನ್. ದೇಸಾಯಿ ತಿಳಿಸಿದರು.
ಬಿಎಂಶ್ರೀ ಪ್ರತಿಷ್ಠಾನದಿಂದ ‘ಕಂಬತ್ತಳ್ಳಿ ಜೀವಣ್ಣ ಪದ್ಮಾವತಮ್ಮ ದತ್ತಿ’ ಪ್ರಶಸ್ತಿಯನ್ನು ಜೈನಸಾಹಿತ್ಯ- ಸಂಸ್ಕೃತಿ ಪ್ರಚಾರಕ ಎಸ್. ಜಿತೇಂದ್ರಕುಮಾರ್ ಅವರಿಗೆ ಭಾನುವಾರ ಪ್ರದಾನ ಮಾಡಿ ಅವರು ಮಾತನಾಡಿದರು.
ಜೈನ ಸಮಾಜದ ಚಿಂತನೆ, ಜೈನ ಸಾಹಿತ್ಯ ಹಾಗೂ ಗ್ರಂಥ ಪುರಾಣಗಳನ್ನು ಪರಿಷ್ಕರಿಸಿ ಮನೆ-ಮನೆಗೆ ತಲುಪಿಸುವ ಕಾರ್ಯವನ್ನು ಜಿತೇಂದ್ರ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಜೈನ ಸಾಹಿತ್ಯ ಉಳಿಸಿ, ಬೆಳೆಸಿ, ಪೋಷಣೆ ಮಾಡುವ ವ್ಯಕ್ತಿಗೆ ಪದ್ಮಾವತಮ್ಮ ದತ್ತಿ ಪ್ರಶಸ್ತಿಯನ್ನು ಬಿಎಂಶ್ರೀ ಪ್ರತಿಷ್ಠಾನ ನೀಡುತ್ತಿದೆ. ಈ ಬಾರಿ ಕರ್ನಾಟಕ ಜೈನ್ ಅಸೋಸಿಯೇಷನ್ ಅಧ್ಯಕ್ಷರೂ ಆಗಿರುವ ಎಸ್. ಜಿತೇಂದ್ರಕುಮಾರ್ ಅವರಿಗೆ ನೀಡಲಾಗಿದೆ ಎಂದು ಹೇಳಿದರು.
'ಗೊಮ್ಮಟ ಸ್ತುತಿ'- ಪುಸ್ತಕ ಜನಾರ್ಪಣೆ ಮಾಡಿದ ಸಾಹಿತಿ ಹಂ.ಪ ನಾಗರಾಜಯ್ಯ ಮಾತನಾಡಿ, ‘ಚಾವುಂಡರಾಯನು ಶ್ರವಣಬೆಳಗೊಳದಲ್ಲಿ ಭಗವಾನ್ ಬಾಹುಬಲಿ ಮೂರ್ತಿಯನ್ನು ಪ್ರತಿಷ್ಠಾಪಿಸಿದ ಸಂದರ್ಭದಲ್ಲಿ ಅವನ ಗುರುಗಳಾದ ನೇಮಿಚಂದ್ರ ಸಿದ್ಧಾಂತ ಚಕ್ರವರ್ತಿಗಳು ರಚಿಸಿದ ಸ್ತುತಿ ಇದು’ ಎಂದು ಕಿರುಹೊತ್ತಿಗೆಯ ಪರಿಚಯ ಮಾಡಿಕೊಟ್ಟರು.
ಪ್ರಾಧ್ಯಾಪಕಿ ಪದ್ಮಿನಿ ನಾಗರಾಜು ಅಭಿನಂದನ ನುಡಿಗಳನ್ನಾಡಿದರು. ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷ ಬೈರಮಂಗಲ ರಾಮೇಗೌಡ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಎಂಜಿನಿಯರ್ ಕೆ.ಜೆ. ಪಾಶ್ವನಾಥ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.