ಬೆಂಗಳೂರು: ‘ವೀರಶೈವ ಸಮಾಜದ ಹಿರಿಯರನ್ನು ಮುದುಕರು’ ಎಂದು ಜರಿದಿರುವ ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ. ಜಾಮದಾರ ಅವರ ಹೇಳಿಕೆಯನ್ನು ಖಂಡಿಸುವುದಾಗಿ ಅಖಿಲ ಭಾರತ ವೀರಶೈವ ಮಹಾಸಭಾ ತಿಳಿಸಿದೆ.
‘ವೀರಶೈವ ಸಮಾಜದ ಪ್ರಮುಖರಾದ ಶಾಮನೂರು ಶಿವಶಂಕರಪ್ಪ, ಎನ್. ತಿಪ್ಪಣ್ಣ ಹಾಗೂ ಹಿರಿಯ ಸಂಶೋಧಕ ಎಂ. ಚಿದಾನಂದಮೂರ್ತಿ ಅವರೆಲ್ಲ ಮುದುಕರು’ ಎಂದು ಜಾಮದಾರ ಟೀಕಿಸಿದ್ದರು.
‘ನಾಲಿಗೆ ಕುಲ ಹೇಳುತ್ತದೆ ಎಂದು ಹಿರಿಯರು ಹೇಳುತ್ತಾರೆ. ಜಾಮದಾರ ಅವರ ಕುಲ ಯಾವುದು ಹಾಗೂ ಅವರು ಹಿರಿಯರ ಬಗ್ಗೆ ಇಟ್ಟಿರುವ ಅಭಿಪ್ರಾಯ ಏನೆಂದು ಸಮಾಜ ಅರ್ಥ ಮಾಡಿಕೊಳ್ಳಬೇಕು’ ಎಂದು ಮಹಾಸಭಾದ ಕಾರ್ಯದರ್ಶಿ ಎಚ್.ಎಂ. ರೇಣುಕ ಪ್ರಸನ್ನ, ಮಾಧ್ಯಮಡಗಳಿಗೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ, ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ ಎಂದು ಬಸವಣ್ಣನವರು ಹೇಳಿದ್ದಾರೆ. ಬಸವಣ್ಣನವರ ಅನುಯಾಯಿ ಎಂದು ಹೇಳುವ ಜಾಮದಾರ, ಶರಣರ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಸಮಾಜದ ಹಿರಿಯರನ್ನು ಹೀಗಳೆಯುವ ಅವರೇನು 21 ವರ್ಷದ ತರುಣರೇ? ನಿವೃತ್ತಿ ವೇತನದಲ್ಲಿ ಬದುಕುತ್ತಿರುವ ಅವರು ಯಾವ ನೈತಿಕತೆ ಮೇಲೆ ಬೇರೆಯವರ ಸೇವೆಯನ್ನು ಪ್ರಶ್ನಿಸುತ್ತಾರೆ. ಇನ್ನು ಮುಂದಾದರೂ ಸಮಾಜ ಹಾಗೂ ಹಿರಿಯರ ಬಗ್ಗೆ ಕೀಳಾಗಿ ಮಾತನಾಡುವುದನ್ನು ನಿಲ್ಲಿಸಲಿ. ನಾವು ಮೌನವಾಗಿರುವುದು ದೌರ್ಬಲ್ಯದಿಂದಲ್ಲ. ಸಮಾಜದ ಹಿತದೃಷ್ಟಿಯಿಂದ. ಇದನ್ನು ದೌರ್ಬಲ್ಯ ಎಂದು ಅವರು ಭಾವಿಸಿದರೆ ಮುಂದಿನ ದಿನಗಳಲ್ಲಿ ಜಾಮದಾರ ಅವರಿಗೆ ತಕ್ಕ ಪಾಠ ಕಲಿಸಲಾಗುವುದು’ ಎಂದೂ ಅವರು ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.