ಬೆಂಗಳೂರು: ಕರ್ನಾಟಕ ಜಾನಪದ ಅಕಾಡೆಮಿಯು 2024ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಕಟಿಸಿದ್ದು, ಜಾನಪದ ವಿದ್ವಾಂಸರಾದ ಮೈಸೂರಿನ ಮೈಲಹಳ್ಳಿ ರೇವಣ್ಣ ಹಾಗೂ ವಿಜಯನಗರ ಜಿಲ್ಲೆಯ ವೆಂಕಟೇಶ ಇಂದ್ವಾಡಿ ಅವರು ‘ಜಾನಪದ ತಜ್ಞ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.
ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಹಾಗೂ ರಿಜಿಸ್ಟ್ರಾರ್ ಎನ್. ನಮ್ರತಾ ಅವರು ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿಯನ್ನು ಇಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು.
‘ವಾರ್ಷಿಕ ಗೌರವ ಪ್ರಶಸ್ತಿಗೆ 30 ಜಿಲ್ಲೆಗಳಿಂದ 30 ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ‘ಜಾನಪದ ತಜ್ಞ ಪ್ರಶಸ್ತಿ’ಯು ತಲಾ ₹ 50 ಸಾವಿರ ನಗದು ಹಾಗೂ ‘ಗೌರವ ಪ್ರಶಸ್ತಿ’ಯು ತಲಾ ₹ 25 ಸಾವಿರ ನಗದು ಒಳಗೊಂಡಿದೆ’ ಎಂದು ಗೊಲ್ಲಹಳ್ಳಿ ಶಿವಪ್ರಸಾದ್ ಹೇಳಿದರು.
‘2024ನೇ ಸಾಲಿನ ವಾರ್ಷಿಕ ಪ್ರಶಸ್ತಿ ಜತೆಗೆ ಈ ಹಿಂದೆ ಘೋಷಿಸಲಾಗಿರುವ 2023ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮಾರ್ಚ್ 15ರಂದು ಬೀದರ್ ಜಿಲ್ಲೆಯ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ 10 ಗಂಟೆಯಿಂದ ಜಾನಪದ ಕಲಾ ಪ್ರದರ್ಶನ ನಡೆಯಲಿದ್ದು, ಮಧ್ಯಾಹ್ನ 2 ಗಂಟೆಯಿಂದ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿದೆ. ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಪ್ರಶಸ್ತಿ ಪ್ರದಾನ ಮಾಡುತ್ತಾರೆ’ ಎಂದು ತಿಳಿಸಿದರು.
ಅಕಾಡೆಮಿ ಸದಸ್ಯರಾದ ಉಮೇಶ್, ಶಂಕ್ರಣ್ಣ ರಾಮಪ್ಪ ಸಂಕಣ್ಣನವರ, ರಂಗಪ್ಪ, ಕೆಂಕೆರೆ ಮಲ್ಲಿಕಾರ್ಜುನ, ಸಿ.ಎನ್. ಮಂಜೇಶ್ ಚೆನ್ನಾಪುರ, ಹುಲಿಕುಂಟೆ ಮೂರ್ತಿ ಹಾಗೂ ದೇವಾನಂದ ವರಪ್ರಸಾದ್ ಉಪಸ್ಥಿತರಿದ್ದರು.
ಗೌರವ ಪ್ರಶಸ್ತಿ: ಬೆಂಗಳೂರಿನ ಜೋಗಿಲ ಸಿದ್ಧರಾಜು (ಜಾನಪದ ಗಾಯನ), ಬೆಂಗಳೂರು ಗ್ರಾಮಾಂತರದ ಸಿದ್ದಯ್ಯ ಸಿ.ಎಚ್. (ತತ್ವಪದ ಮತ್ತು ಗೀಗಿ ಪದ), ರಾಮನಗರದ ಎಂ.ಮಹೇಶ್ (ಡೊಳ್ಳು ಕುಣಿತ), ಕೋಲಾರದ ಸುನಂದಮ್ಮ (ಕೋಲಾಟ), ಚಿಕ್ಕಬಳ್ಳಾಪುರದ ವೆಂಕಟರಮಣಪ್ಪ (ಅರೆವಾದ್ಯ, ತಮಟೆ), ತುಮಕೂರಿನ ಸಿದ್ದಪ್ಪ (ಕಿನ್ನರಿ ಜೋಗಿ), ದಾವಣಗೆರೆಯ ಮಾರ್ತಾಂಡಪ್ಪ (ಭಜನೆ), ಚಿತ್ರದುರ್ಗದ ಎ. ಶ್ರೀನಿವಾಸ (ಹಗಲು ವೇಷ), ಶಿವಮೊಗ್ಗದ ಗೌರಮ್ಮ (ಹಸೆ ಚಿತ್ತಾರ), ಮೈಸೂರಿನ ಸಿ. ಮಂಜುನಾಥ (ಚರ್ಮವಾದ್ಯ ನಗಾರಿ) ಹಾಗೂ ಮಂಡ್ಯದ ಹುರುಗಲವಾಡಿ ರಾಮಯ್ಯ (ಜಾನಪದ ಗಾಯನ).
ಹಾಸನದ ಬಿ.ಟಿ.ಮಾನವ (ಕೋಲಾಟ), ಚಿಕ್ಕಮಗಳೂರಿನ ಬಿ.ಪಿ. ಪರಮೇಶ್ವರಪ್ಪ (ಭಜನೆ), ಚಾಮರಾಜನಗರದ ಸಿದ್ಧರಾಜು ಆರ್. (ತಂಬೂರಿ ಪದ), ದಕ್ಷಿಣ ಕನ್ನಡದ ಜಯಂತಿ (ಪಾಡ್ದನ), ಉಡುಪಿಯ ಎನ್. ಗಣೇಶ್ ಗಂಗೊಳ್ಳಿ (ಜಾನಪದ ಗಾಯನ), ಕೊಡಗಿನ ಎಸ್.ಆರ್. ಸರೋಜ (ಬುಡಕಟ್ಟು ಕೋಲಾಟ, ಜೇನು ಕೊಯ್ಯುವ ಹಾಡು ಮತ್ತು ನೃತ್ಯ), ಬೆಳಗಾವಿಯ ಕಮಲಾ ಮರಗನ್ನವರ (ಚೌಡಕಿ ಪದ), ಧಾರವಾಡದ ಪ್ರಭು ಬಸಪ್ಪ ಕುಂದರಗಿ (ಜಾನಪದ ಸಂಗೀತ), ವಿಜಯಪುರದ ಸೋಮಣ್ಣ ದುಂಡಪ್ಪ ಧನಗೊಂಡ (ಡೊಳ್ಳು ಕುಣಿತ).
ಬಾಗಲಕೋಟೆಯ ಗಂಗಪ್ಪ ಮ. ಕರಡಿ (ಕರಡಿ ಮಜಲು), ಉತ್ತರ ಕನ್ನಡದ ಗಣಪು ಬಡವಾ ಗೌಡ (ಹಾಲಕ್ಕಿ ಸುಗ್ಗಿ ಕುಣಿತ), ಹಾವೇರಿಯ ಗಿರಿಜವ್ವ ಹನುಮಪ್ಪ ಬಣಕಾರ (ಸಂಪ್ರದಾಯದ ಪದ, ಸೋಬಾನೆ ಪದ), ಗದಗದ ಗೋವಿಂದಪ್ಪ ರಾಮಚಂದ್ರಪ್ಪ ವೇಷಗಾರ (ಹಗಲು ವೇಷ), ಕಲಬುರಗಿಯ ಬೋರಮ್ಮ (ತತ್ವಪದ), ಬೀದರ್ನ ಮಾರುತಿ ಕೋಳಿ (ಜನಪದ ಗಾಯನ), ರಾಯಚೂರಿನ ಯಲ್ಲಮ್ಮ (ತತ್ವಪದ), ಕೊಪ್ಪಳದ ಎಚ್. ಚಂದ್ರಶೇಖರ ಹಡಪದ (ಭಜನೆ), ಬಳ್ಳಾರಿಯ ಕೆ. ಶಂಕರಪ್ಪ (ಹಗಲುವೇಷ) ಹಾಗೂ ಯಾದಗಿರಿಯ ಗೋಪಣ್ಣ (ತತ್ವಪದ, ಭಜನೆ).
ಸರ್ಕಾರ ನೀಡುವ ಅನುದಾನ ಆಧರಿಸಿ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ವಾರ್ಷಿಕ ₹ 3 ಕೋಟಿ ಅನುದಾನ ನೀಡಿದರೆ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯ.ಗೊಲ್ಲಹಳ್ಳಿ ಶಿವಪ್ರಸಾದ್, ಜಾನಪದ ಅಕಾಡೆಮಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.