ಬೆಂಗಳೂರು: ‘ಇಂದಿನ ವಿದ್ಯುನ್ಮಾನ ಮಾಧ್ಯಮಗಳು ನೋಡಲಾಗದಷ್ಟು ಹದಗೆಟ್ಟಿದ್ದು, ಅವುಗಳಿಂದಾಗಿ ಜಾನಪದ ಕಲೆಯ ನೈಜತೆಗೆ ಧಕ್ಕೆ ಉಂಟಾಗುತ್ತಿದೆ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಹಿ.ಚಿ.ಬೋರಲಿಂಗಯ್ಯ ಕಳವಳ ವ್ಯಕ್ತಪಡಿಸಿದರು.
ಆಕಾಶವಾಣಿ ಸೋಮವಾರ ಆಯೋಜಿಸಿದ್ದ 'ಚೈತ್ರದ ಚಿಲುಮೆ; ಜಾನಪದ ಮೇಳ'ದಲ್ಲಿ ಅವರು ಮಾತನಾಡಿದರು.
‘ಜಾಗತೀಕರಣ ಮತ್ತು ವಿದೇಶಿ ಸಂಸ್ಕೃತಿ ಪ್ರಭಾವ ಹೆಚ್ಚಾಗಿ ನಮ್ಮ ಕಲೆಕಳೆದುಕೊಳ್ಳುತ್ತಿದ್ದೇವೆ. ಜಾನಪದ ಸಂಸ್ಕೃತಿ, ಪರಂಪರೆಯನ್ನು ಉಳಿಸಲು ಸರ್ಕಾರವೇ ಮುಂದಾಗದಿರುವುದು ನೋವಿನ ಸಂಗತಿ’ ಎಂದು ಹೇಳಿದರು.
ಆಕಾಶವಾಣಿ ನಿಲಯ ನಿರ್ದೇಶಕ ಜಿ.ಕೆ.ರವಿಕುಮಾರ್, 'ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವ ಆಕಾಶವಾಣಿ ಜಾನಪದ ಕಲಾವಿದರ ತವರು. ಮುಖ್ಯವಾಹಿನಿಗೆ ಬಾರದ ಬುಡಕಟ್ಟು ಸಮುದಾಯದವರನ್ನು ಗುರುತಿಸಿ ಅವರಿಂದ ಜಾನಪದ ಗೀತೆಗಳನ್ನು ಸಂಗ್ರಹಿಸುತ್ತಿದ್ದೇವೆ. ಅವುಗಳನ್ನು ಇಂಗ್ಲಿಷ್ ಭಾಷೆಗೂ ಅನುವಾದ ಮಾಡುವ ಚಿಂತನೆ ಇದೆ’ ಎಂದರು.
ರಾಮನಗರದ ಶ್ರೀನಿವಾಸ ಮತ್ತು ತಂಡ ತಮಟೆ ವಾದ್ಯಗಳ ಲಯಕ್ಕೆ ಹೆಜ್ಜೆ ಹಾಕಿ ಸೈ ಎನಿಸಿಕೊಂಡರು. 15 ವರ್ಷದ ಬಾಲಕಿ ಪೂಜಾ 30 ಕೆ.ಜಿ.ತೂಕದ ದೇವರ ವಿಗ್ರಹ ಹೊತ್ತು ನರ್ತಿಸಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದರು. ಹಿ.ಚಿ.ಬೋರಲಿಂಗಯ್ಯ ಅವರುವೇದಿಕೆಗೆ ಏರಿಪೂಜಾಗೆ ಅಭಿನಂದನೆ ಸಲ್ಲಿಸಿ ಸ್ಮರಣಿಕೆ ನೀಡಿದರು.
ಕೋಲಾರದ ಡಿ.ಆರ್.ರಾಜಪ್ಪ ಮತ್ತು ತಂಡದ ಕಲಾವಿದರು ದೇವರ ಪದಗಳು ಸೇರಿದಂತೆ ಬಗೆಬಗೆಯ ಜನಪದ ಗೀತೆಗಳನ್ನು ಹಾಡಿ ಪ್ರೇಕ್ಷಕರ ಮನಸೂರೆಗೊಂಡರು.
ವಿವಿಧ ವೇಷ ಧರಿಸಿದ್ದ ತುರುವೇಕೆರೆ ತಾಲ್ಲೂಕಿನ ಡಿ.ಎಲ್.ಲಕ್ಷ್ಮಣಗೌಡ ಮತ್ತು ತಂಡದ ಕಲಾವಿದರು ಕೋಲಾಟ ಆಡಿದರು. ಶಿವಮೊಗ್ಗದ ವೀರಪ್ಪ ಮತ್ತು ತಂಡದ ಕಲಾವಿದರು ವೀರಗಾಸೆ ಕಲೆಯನ್ನು ಪ್ರದರ್ಶಿಸಿ ಗಮನ ಸೆಳೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.