ADVERTISEMENT

‘ಜನಸೇವಕ': ಮನೆ ಬಾಗಿಲಿಗೆ 50 ಸೇವೆಗಳು

​ಪ್ರಜಾವಾಣಿ ವಾರ್ತೆ
Published 24 ಜನವರಿ 2020, 23:18 IST
Last Updated 24 ಜನವರಿ 2020, 23:18 IST
ಜನಸೇವಕರೊಬ್ಬರಿಗೆ ಸಮವಸ್ತ್ರ ನೀಡುವ ಮೂಲಕ ‘ಜನಸೇವಕ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕಾರ್ಮಿಕ ಸಚಿವ ಎಸ್.ಸುರೇಶ್ ಕುಮಾರ್, ಉಪಮೇಯರ್ ರಾಮಮೋಹನ್ ರಾಜ್, ಶಾಸಕ ಸತೀಶ್ ರೆಡ್ಡಿ ಇದ್ದಾರೆ
ಜನಸೇವಕರೊಬ್ಬರಿಗೆ ಸಮವಸ್ತ್ರ ನೀಡುವ ಮೂಲಕ ‘ಜನಸೇವಕ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕಾರ್ಮಿಕ ಸಚಿವ ಎಸ್.ಸುರೇಶ್ ಕುಮಾರ್, ಉಪಮೇಯರ್ ರಾಮಮೋಹನ್ ರಾಜ್, ಶಾಸಕ ಸತೀಶ್ ರೆಡ್ಡಿ ಇದ್ದಾರೆ   

ಬೊಮ್ಮನಹಳ್ಳಿ:ನಾಗರಿಕರು ಅಗತ್ಯ ಸೇವೆಗಳನ್ನು ಪಡೆಯಲು ಸರ್ಕಾರಿ ಕಚೇರಿ ಅಲೆಯುವುದನ್ನು ತಪ್ಪಿಸುವ ಸಲುವಾಗಿ ಸಕಾಲ ಯೋಜನೆಯಡಿ ತಂದಿರುವ ‘ಜನಸೇವಕ’ ಕಾರ್ಯಕ್ರಮದ ಪ್ರಯೋಗಾರ್ಥ ಅನುಷ್ಠಾನಕ್ಕೆ ಬೊಮ್ಮನಹಳ್ಳಿ ವಲಯದಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು.

ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವೃದ್ಯಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ, ಬಿಬಿಎಂಪಿ ಖಾತೆ ಸೇವೆಗಳು, ಪೊಲೀಸ್ ಇಲಾಖೆ ಹಾಗು ಕಾರ್ಮಿಕ ಇಲಾಖೆ ಸೇರಿದಂತೆ 50ಕ್ಕೂ ಹೆಚ್ಚು ಸೇವೆಗಳನ್ನು ನಾಗರಿಕರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯಕ್ರಮ ಇದಾಗಿದೆ.

ಆರಂಭದಲ್ಲಿ ವಾರ್ಡ್ ಗೆ ಒಬ್ಬರಂತೆ ಜನಸೇವಕರನ್ನು ನೇಮಿಸಲಾಗಿದ್ದು, ಇವರಿಗೆ ಟ್ಯಾಬ್, ಬ್ಯಾಡ್ಜ್ ಮತ್ತು ಸಮವಸ್ತ್ರ ನೀಡಲಾಗಿದೆ. ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಕಾರ್ಯನಿರ್ವಹಿಸುವರು. ಸೇವೆ ಪಡೆಯಲು ಇಚ್ಚಿಸುವವರು 080-44554455 ನಂಬರ್ ಗೆ ಕರೆ ಮಾಡಿದಲ್ಲಿ ‘ಜನಸೇವಕ’ ಭೇಟಿ ನೀಡಿ, ಆನ್‌ಲೈನ್‌ನಲ್ಲಿ ಅರ್ಜಿ ಸ್ವೀಕರಿಸಿ, ದಾಖಲಾತಿಗಳನ್ನು ಪಡೆದ ನಂತರ, ಕಾಲಮಿತಿಯೊಳಗೆ ಸೇವೆಯನ್ನು ಮನೆ ಬಾಗಿಲಿಗೆ ತಲುಪಿಸುವುದು ಜನಸೇವಕರ ಕೆಲಸವಾಗಿರುತ್ತದೆ. ಇದಕ್ಕೆ ₹115 ಸೇವಾಶುಲ್ಕ ನೀಡಬೇಕಾಗುತ್ತದೆ.

ADVERTISEMENT

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕಾರ್ಮಿಕ ಸಚಿವ ಎಸ್.ಸುರೇಶ್ ಕುಮಾರ್, ‘ಸಕಾಲವನ್ನು ಇನ್ನಷ್ಟು ಜನರ ಬಳಿಗೆ ಕೊಂಡೊಯ್ಯುವ ಸಲುವಾಗಿ ಈ ಕಾರ್ಯಕ್ರಮ ತರಲಾಗಿದೆ. ನಗರದ ಜನರ ಬ್ಯುಸಿ ಬದುಕನ್ನು ಗಮನದಲ್ಲಿರಿಸಿ, ಜನರು ಇದ್ದಲ್ಲಿಗೆ ಸೇವೆ ದೊರಕುವಂತೆ ಮಾಡುವುದು ಈ ಕಾರ್ಯಕ್ರಮ ಉದ್ದೇಶ’ ಎಂದರು.

ಸಕಾಲ ಮಿಷನ್ ನಿರ್ದೇಶಕ ವರಪ್ರಸಾದ್ ರೆಡ್ಡಿ ‘ಬೆಂಗಳೂರಿನ ನಾಲ್ಕು ವಿಧಾನಸಭಾ ಕ್ಷೇತ್ರಗಳಾದ ದಾಸರಹಳ್ಳಿ, ಮಹದೇವಪುರ, ರಾಜಾಜಿನಗರ ಮತ್ತು ಬೊಮ್ಮನಹಳ್ಳಿಯಲ್ಲಿ ಪ್ರಯೋಗಾರ್ಥ ಅನುಷ್ಠಾನ ಮಾಡಲಾಗಿದೆ, ವಾರ್ಡ್‌ಗೆ ಒಬ್ಬರಂತೆ ಜನ ಸೇವಕರನ್ನು ನಿಯೋಜಿಸಲಾಗಿದ್ದು ಬೇಡಿಕೆ ಆಧರಿಸಿ ಸಂಖ್ಯೆ ಹೆಚ್ಚಿಸಲಾಗುವುದು, ಇದಕ್ಕಾಗಿ ‘ಮೊಬೈಲ್ ಒನ್’ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.