ಬೆಂಗಳೂರು: ರೈಲು ಮತ್ತು ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಿದ್ದರೂ ಅಪ್ಪಿತಪ್ಪಿ ಬರಲಿವೆಯೇನೋ ಎಂದು ಕೆಲ ಪ್ರಯಾಣಿಕರು ಅಲ್ಲಲ್ಲಿ ಕಾದು ನಿಂತಿದ್ದರು. ತಿಪಟೂರು, ಅರಸೀಕೆರೆ ಕಡೆಗೆ ಹೋಗಬೇಕಿದ್ದ ಹತ್ತಕ್ಕೂ ಹೆಚ್ಚು ಮಂದಿ ತುಮಕೂರು ರಸ್ತೆಯ 8ನೇ ಮೈಲಿ, ಜಾಲಹಳ್ಳಿ ಕ್ರಾಸ್ ಬಳಿ ನಿಂತಿದ್ದರು.
‘ಮದುವೆಯೊಂದಕ್ಕೆ ರಾತ್ರಿ ಬಂದಿದ್ದೆವು. ಮರಳಿ ಊರಿಗೆ ಹೋಗಬೇಕಿದೆ. ಯಾವುದಾದರೂ ವಾಹನ ಬರಬಹುದು ಎಂಬ ನಿರೀಕ್ಷೆಯಲ್ಲಿ ನಾಲ್ಕೈದು ಗಂಟೆಗಳಿಂದ ಕಾಯುತ್ತಿದ್ದೇವೆ. ಬಸ್ಗಳಿರಲಿ, ಲಾರಿ, ಕಾರುಗಳೂ ಬರುತ್ತಿಲ್ಲ’ ಎಂದು ಅರಸೀಕೆರೆಯ ಶಿವರುದ್ರಪ್ಪ ಹೇಳಿದರು. ಯಶವಂತಪುರ ರೈಲು ನಿಲ್ದಾಣ ಬಾಗಿಲು ಮುಚ್ಚಿದ್ದರೂ ಮೆಟ್ಟಿಲುಗಳ ಮೇಲೆ 40 ಮಂದಿ ಕಾದು ಕುಳಿತಿದ್ದರು. ರೈಲ್ವೆ ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರರ ಬಳಿ ಕೆಲಸ ಮಾಡುವ ಕಾರ್ಮಿಕರುಕೂಡ ಇದ್ದರು. ‘ಪಾಂಡವಪುರದಲ್ಲಿ ನಾಳೆಯಿಂದ ಕಾಮಗಾರಿ ಆರಂಭವಾಗುತ್ತಿದೆ. ಅಲ್ಲಿಗೆ ಹೋಗಲು ವಾಹನಗಳಿಲ್ಲ. ಮಕ್ಕಳು, ಮಹಿಳೆಯರ ಸಮೇತ ಇಲ್ಲೇ ಇದ್ದೇವೆ’ ಎಂದು ಶಬ್ಬೀರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.