ADVERTISEMENT

ಜಾತಿ ಗಣತಿ: ರಾಜಕೀಯ ಷಡ್ಯಂತ್ರ ಎಂದ ಎಸ್.ಹರೀಶ್

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2021, 16:20 IST
Last Updated 4 ಸೆಪ್ಟೆಂಬರ್ 2021, 16:20 IST

ಬೆಂಗಳೂರು: ‘ಜಾತಿ ಜನಗಣತಿ ಹೆಸರಿನಲ್ಲಿ ರಾಜ್ಯದಾದ್ಯಂತ ಕುರುಬ ಸಮುದಾಯ ಅತಿ ಹೆಚ್ಚಿನ ಜನಸಂಖ್ಯೆ ಹೊ‌ಂದಿದೆ ಎಂಬ ತಪ್ಪು ಕಲ್ಪನೆ ಮೂಡಿಸುವ ರಾಜಕೀಯ ಷಡ್ಯಂತ್ರ ನಡೆಯುತ್ತಿದೆ’ ಎಂದು ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ಎಸ್.ಹರೀಶ್ ಆರೋಪಿಸಿದರು.

ಒಕ್ಕಲಿಗ-ವೀರಶೈವ-ಲಿಂಗಾಯತ ಸೌಹಾರ್ದ ವೇದಿಕೆಯು ‘ಜಾತಿ ಜನಗಣತಿ ಹೆಸರಿನಲ್ಲಿ ರಾಜಕೀಯ ದುರ್ಲಾಭ ಗಳಿಕೆಯ ಷಡ್ಯಂತ್ರ’ ಕುರಿತು ನಗರದಲ್ಲಿ ಆಯೋಜಿಸಿದ್ದ ಚಿಂತನ– ಮಂಥನದಲ್ಲಿ ಅವರು ಮಾತನಾಡಿದರು.

‘ಜಾತಿ ಹೆಸರಿನಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹಿಂದುಳಿದ ವರ್ಗಗಳ ಶಾಶ್ವತ ಆಯೋಗವನ್ನು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ದುರುಪಯೋಗ ಮಾಡಿಕೊಂಡಿದ್ದಾರೆ’ ಎಂದು ದೂರಿದರು.

ADVERTISEMENT

‘ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ವಿಚಾರಣೆ ನಡೆಯುತ್ತಿದೆ. ಈ ಹಂತದಲ್ಲಿ ವರದಿ ಬಿಡುಗಡೆ ಮಾಡಬೇಕು ಎಂದು ಕೆಲವರು ಆಗ್ರಹಿಸುತ್ತಿರುವುದರ ಹಿಂದೆ ಸಮಾಜ ಒಡೆಯುವ ಹುನ್ನಾರವಿದೆ’ ಎಂದರು.

ಹೈಕೋರ್ಟ್ ವಕೀಲ ಗಂಗಾಧರ ಗುರುಮಠ ಮಾತನಾಡಿ, ‘ವಾಸ್ತವದಲ್ಲಿ ಜಾತಿ ಜನಗಣತಿ ನಡೆಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಇದು ಏನಿದ್ದರೂ ಕೇಂದ್ರ ಸರ್ಕಾರಕ್ಕೆ ಬಿಟ್ಟದ್ದು’ ಎಂದರು.

‌ಮತ್ತೊಬ್ಬ ಹೈಕೋರ್ಟ್ ವಕೀಲ ಎಚ್.ವಿ. ಪ್ರವೀಣಗೌಡ ಮಾತನಾಡಿ, ‘ಜಾತಿ ಹೆಸರಿನಲ್ಲಿ ಸಮಾಜದಲ್ಲಿ ಅರಾಜಕತೆ ಸೃಷ್ಟಿಯಾಗಬಾರದು’ ಎಂದರು.

ಆಯೋಜಕ ಬಿ.ಎಸ್.ನಟರಾಜ್, ಯಡಿಯೂರಿನ ಬಾಳೆಹೊನ್ನೂರು ಶಾಖಾ ಮಠದ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಸರ್ಪಭೂಷಣ ಮಠದ ಮಲ್ಲಿಕಾರ್ಜುನ ದೇವರು, ವಿಭೂತಿಪುರ ಮಠದ ಮಹಾಂತಲಿಂಗ ಶಿವಾಚಾರ್ಯರು, ಕೊಟ್ಟೂರಿನ ಡೋಣೂರು ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಹಿರೇಹಡಗಲಿಯ ಮಹಾಸಂಸ್ಥಾನ ಮಠದ ಅಭಿನವ ಹಾಲಸ್ವಾಮೀಜಿ, ಹಾವೇರಿ ಜಿಲ್ಲೆಯ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.