ಬೆಂಗಳೂರು: ವೈಟ್ಫೀಲ್ಡ್ ಠಾಣೆ ವ್ಯಾಪ್ತಿಯಲ್ಲಿರುವ ಆಭರಣ ಮಳಿಗೆಯೊಂದರಲ್ಲಿದ್ದ ₹ 35 ಲಕ್ಷ ಮೌಲ್ಯದ ಬೆಳ್ಳಿ ಸಾಮಗ್ರಿ ಹಾಗೂ ₹10 ಸಾವಿರ ಹಣವನ್ನು ಕಳ್ಳರು ಕದ್ದೊಯ್ದಿದ್ದಾರೆ.
‘ಇಮ್ಮಡಿಹಳ್ಳಿಯಲ್ಲಿರುವ ಮಾತಾಜಿ ಆಭರಣ ಮಳಿಗೆಯಲ್ಲಿ ಆಗಸ್ಟ್ 4ರ ತಡರಾತ್ರಿ ಈ ಕೃತ್ಯ ನಡೆದಿದೆ. ಮಾಲೀಕ ಧರ್ಮರಾಮ್ ಎಂಬುವರು ದೂರು ನೀಡಿದ್ದಾರೆ’ ಎಂದು ಪೊಲೀಸರು ಹೇಳಿದರು.
‘ಆಭರಣ ಮಳಿಗೆ ಪಕ್ಕವೇ ಗ್ರಂಥಿಗೆ ಮಾರಾಟ ಅಂಗಡಿ ಇದೆ. ಅದೇ ಅಂಗಡಿಯ ಶೆಟರ್ ಮುರಿದು ಒಳನುಗ್ಗಿರುವ ಕಳ್ಳರು, ಅಲ್ಲಿರುವ ಕಿಟಕಿ ಸರಳು ಮುರಿದು ಆಭರಣ ಮಳಿಗೆ ಪ್ರವೇಶಿಸಿದ್ದಾರೆ. ಚಿನ್ನದ ಆಭರಣಗಳಿದ್ದ ಲಾಕರ್ ಒಡೆಯಲು ಪ್ರಯತ್ನಿಸಿದ್ದಾರೆ. ಆದರೆ, ಲಾಕರ್ ತೆರೆಯಲು ಸಾಧ್ಯವಾಗಿಲ್ಲ. ಬಳಿಕ, ಮಳಿಗೆಯಲ್ಲಿದ್ದ ಬೆಳ್ಳಿ ಸಾಮಗ್ರಿ ಹಾಗೂ ನಗದು ಕದ್ದುಕೊಂಡು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ’ ಎಂದೂ ತಿಳಿಸಿದರು.
‘ಕಳವು ಕೃತ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ’ ಎಂದು ಪೊಲೀಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.