ADVERTISEMENT

ಬೆಂಗಳೂರು | ಪತ್ನಿ ಬಿಟ್ಟು ಪ್ರೇಯಸಿ ಜೊತೆ ವಾಸವಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2023, 19:30 IST
Last Updated 19 ಫೆಬ್ರುವರಿ 2023, 19:30 IST
   

ಬೆಂಗಳೂರು: ‘ಪತ್ನಿಯನ್ನು ಬಿಟ್ಟು ಪ್ರೇಯಸಿ ಜೊತೆ ವಾಸವಿದ್ದರು’ ಎನ್ನಲಾದ ನಾಗೇಶ್ (34) ಎಂಬುವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.

‘ಸ್ಥಳೀಯ ಅಂಬೇಡ್ಕರ್‌ ನಗರ ನಿವಾಸಿ ನಾಗೇಶ್ ಅವರು ನಾಪತ್ತೆಯಾದ ಬಗ್ಗೆ ಕುಂಬಳಗೋಡು ಠಾಣೆಯಲ್ಲಿ ಇತ್ತೀಚೆಗೆ ಪ್ರಕರಣ ದಾಖಲಾಗಿತ್ತು. ಇದರ ನಡುವೆಯೇ, ವಿಶ್ವೇಶ್ವರಯ್ಯ ಬಡಾವಣೆಯ 6ನೇ ಹಂತದಲ್ಲಿ ನಾಗೇಶ್‌ ಅವರ ಮೃತದೇಹ ಭಾನುವಾರ ಬೆಳಿಗ್ಗೆ ಪತ್ತೆಯಾಗಿದೆ’ ಎಂದು ಜ್ಞಾನಭಾರತಿ ಠಾಣೆ ಪೊಲೀಸರು ಹೇಳಿದರು.

‘ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹವಿತ್ತು. ಇದೊಂದು ಆತ್ಮಹತ್ಯೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ವಿವಾಹಿತನಾಗಿದ್ದ ನಾಗೇಶ್, ಮಹಿಳೆಯೊಬ್ಬರ ಜೊತೆ ಸಲುಗೆ ಇಟ್ಟುಕೊಂಡಿದ್ದರು. ಈ ಸಂಗತಿ ಪತ್ನಿಗೆ ಗೊತ್ತಿರಲಿಲ್ಲ. ಕೆಲದಿನಗಳ ಹಿಂದೆಯಷ್ಟೇ ಪತ್ನಿಯನ್ನು ತೊರೆದಿದ್ದ ನಾಗೇಶ್, ಪ್ರೇಯಸಿ ಜೊತೆ ಕುಂಬಳಗೋಡಿಗೆ ಹೋಗಿ ವಾಸವಿದ್ದ. ಈ ಸಂಗತಿ ತಿಳಿಯುತ್ತಿದ್ದಂತೆ ಪತ್ನಿ, ಕುಂಬಳಗೋಡಿಗೆ ಹೋಗಿ ಪತಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ನಾಗೇಶ್, ಪ್ರೇಯಸಿ ಜೊತೆ ಸ್ಥಳದಿಂದ ಪರಾರಿಯಾಗಿದ್ದ’

’ನಾಗೇಶ್ ಎಲ್ಲಿದ್ದಾರೆ ಎಂಬುದು ಪತ್ನಿಗೆ ಗೊತ್ತಿರಲಿಲ್ಲ. ಹೀಗಾಗಿ, ಕುಂಬಳಗೋಡು ಠಾಣೆಗೆ ದೂರು ನೀಡಿದ್ದರು. ಇದರ ಬೆನ್ನಲ್ಲೇ ನಾಗೇಶ್ ಅವರ ಮೃತದೇಹ ಪತ್ತೆಯಾಗಿದ್ದು, ಸಾವಿನಲ್ಲಿ ಅನುಮಾನ ಇರುವುದಾಗಿ ಸಂಬಂಧಿಕರು ಹೇಳುತ್ತಿದ್ದಾರೆ. ಪ್ರೇಯಸಿ ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.