ಬೆಂಗಳೂರು: ಕೌಶಲ, ಮರುಕೌಶಲ ಹಾಗೂ ಕೌಶಲ ಉನ್ನತೀಕರಣಕ್ಕೆ ಒತ್ತು ನೀಡುವವರಿಗೆ ನಿರುದ್ಯೋಗದ ಸಮಸ್ಯೆ ಎದುರಾಗದು ಎಂದು ಶಾಸಕ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದರು.
ಬಸವ ಜಯಂತಿ ಪ್ರಯುಕ್ತ ಡಾ. ಅಶ್ವತ್ಥ ನಾರಾಯಣ ಫೌಂಡೇಷನ್ ವತಿಯಿಂದ ಏರ್ಪಡಿಸಲಾಗಿದ್ದ ‘ಮಲ್ಲೇಶ್ವರ ಉದ್ಯೋಗ ಮೇಳ’ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಬುಧವಾರ ಮಾತನಾಡಿದರು.
‘ಹೊಸ ಉದ್ಯಮ ಹಾಗೂ ನವೋದ್ಯಮ ಕ್ಷೇತ್ರಗಳು ಕೌಶಲವಿರುವ ಪ್ರತಿಭಾವಂತರಿಗಾಗಿ ಶೋಧನೆ ನಡೆಸುತ್ತಿವೆ. ಬೆಂಗಳೂರು ನಗರವಂತೂ ಪ್ರಪಂಚದಲ್ಲೇ ಅತ್ಯಂತ ಹೆಚ್ಚು ಬೆಳವಣಿಗೆ ಕಾಣುತ್ತಿರುವ ನಗರಗಳಲ್ಲಿ ಒಂದಾಗಿದೆ. ಹೀಗಾಗಿ, ಇಲ್ಲಿ ಉದ್ಯೋಗಾವಕಾಶಗಳು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿದ್ದು, ಕೌಶಲ ಹೊಂದಿದವರು ಮಾತ್ರ ಈ ಅವಕಾಶ ಬಳಸಿಕೊಳ್ಳಲು ಸಾಧ್ಯವಾಗುತ್ತದೆ’ ಎಂದರು.
ಉದ್ಯೋಗ ಮೇಳದಲ್ಲಿ 97 ಕಂಪನಿಗಳು, 1,075 ಅಭ್ಯರ್ಥಿಗಳು ಪಾಲ್ಗೊಂಡಿದ್ದರು. 104 ಅಭ್ಯರ್ಥಿಗಳು ಸ್ಥಳದಲ್ಲೇ ನೇಮಕಗೊಂಡರು, 506 ಅಭ್ಯರ್ಥಿಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದಾರೆ ಎಂದು ಫೌಂಡೇಶನ್ ತಿಳಿಸಿದೆ.
ಈಶ್ವರ ಸೇವಾ ಮಂಡಳಿ ಅಧ್ಯಕ್ಷೆ ಸೌಭಾಗ್ಯ, ಎಫ್ಕೆಸಿಸಿಐ ಅಧ್ಯಕ್ಷ ಬಾಲಕೃಷ್ಣ, ಬೆಂಗಳೂರು ಉತ್ತರ ಬಿಜೆಪಿ ಜಿಲ್ಲಾಧ್ಯಕ್ಷ ಎಸ್. ಹರೀಶ್, ನಟ ಗಣೇಶ್ ರಾವ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.