ಬೆಂಗಳೂರು: ಪ್ರೇಮಿಗಳ ನೆಚ್ಚಿನ ತಾಣ, ವಾಯುವಿಹಾರಿಗಳ ಸ್ವರ್ಗ ಕಬ್ಬನ್ ಉದ್ಯಾನದಲ್ಲಿ ನೂತನ ಜಾಗಿಂಗ್
ಪಥ, ಸೈಕಲ್ ಟ್ರ್ಯಾಕ್, ‘ಕಮಲದ ಕೊಳ’ದ ನವೀಕರಣ ಕಾಮಗಾರಿ ಭರದಿಂದ ಸಾಗಿದೆ. ಅಕ್ಟೋಬರ್ ಅಂತ್ಯದೊಳಗೆ ಉದ್ಯಾನ ಹೊಸ ರೂಪ ತಾಳಲಿದೆ.
‘ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ₹24 ಕೋಟಿ ಅನುದಾನದಲ್ಲಿ ಕಬ್ಬನ್ ಉದ್ಯಾನದ ವಿವಿಧ ನವೀಕರಣ ಕಾಮಗಾರಿಗಳು ಅಂತಿಮ ಹಂತ ತಲುಪಿವೆ. ಉದ್ಯಾನದ ಒಳಗಡೆ ಇರುವ 8 ಕಿ.ಮೀ. ಪಾದಚಾರಿ ಮಾರ್ಗದ ದುರಸ್ತಿ ಕಾರ್ಯ ನಡೆಯುತ್ತಿದೆ. ಹೊಸಕೋಟೆ ಗ್ರಾವೆಲ್ ಬಳಸಿ 4 ಕಿ.ಮೀ. ಜಾಗಿಂಗ್ ಪಾಥ್ ಮಾಡಲಾಗುತ್ತಿದೆ’ ಎಂದು ತೋಟಗಾರಿಕೆ ಇಲಾಖೆಯ (ಕಬ್ಬನ್ ಉದ್ಯಾನ) ಉಪನಿರ್ದೇಶಕ ಎಚ್.ಟಿ. ಬಾಲಕೃಷ್ಣ ಮಾಹಿತಿ ನೀಡಿದರು.
ಸ್ಮಾರ್ಟ್ಸಿಟಿ ಯೋಜನೆ ಅಡಿಯಲ್ಲಿ ಎರಡು ಹಂತಗಳಲ್ಲಿ ಕಾಮಗಾರಿ ಕೈಗೊಳ್ಳಲಾಗಿತ್ತು. 2022ರ ಮಾರ್ಚ್ನಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಿಲ್ಲ. ಅಕ್ಟೋಬರ್ ಅಂತ್ಯದೊಳಗೆ ಕಬ್ಬನ್ ಉದ್ಯಾನ ಹೊಸ ರೂಪ ಪಡೆದುಕೊಳ್ಳಲಿದೆ. ತಾವರೆ ಕೊಳ ಪುನರುಜ್ಜೀವನ, ಮಳೆ ನೀರು ಸಂಗ್ರಹಿಸಲು ಅಚ್ಚುಕಟ್ಟು ಪ್ರದೇಶದ ಮರು ಅಭಿವೃದ್ಧಿ, ಹೊಸ ಬೇಲಿಯನ್ನು ಇಲ್ಲಿಯೂ ಅಳವಡಿಸಲಾಗುತ್ತಿದೆ.
ಉದ್ಯಾನದಲ್ಲಿರುವ ನಾಲ್ಕು ಕಾರಂಜಿಗಳಿಗೆ ಜೀವ ತುಂಬಲಾಗುತ್ತಿದೆ. ಹೊಸದಾಗಿ 300 ಬೆಂಚ್ಗಳನ್ನು ಅಳವಡಿಸಲಾಗುತ್ತಿದ್ದು, ಈಗಾಗಲೇ 200 ಬೆಂಚ್ಗಳನ್ನು ಅಳವಡಿಸಲಾಗಿದೆ. 200 ವಿವಿಧ ಆಲಂಕಾರಿಕ ಕಸದ ಬುಟ್ಟಿಗಳನ್ನು ಅಳವಡಿಸಲಾಗುವುದು. ಉದ್ಯಾನದ ಬಂಡೆ ಭಾಗದಲ್ಲಿ 18 ಎಕರೆ ಪ್ರದೇಶದಲ್ಲಿ ನೂತನವಾಗಿ ಹುಲ್ಲುಹಾಸನ್ನು ಬೆಳೆಸಲಾಗಿದೆ. ಉದ್ಯಾನದಲ್ಲಿ ಈಗಾಗಲೇ ಶೇಕಡ 65 ಭಾಗ ನೀರಾವರಿ ಮತ್ತು ಪೈಪ್ಲೈನ್ ಅಳವಡಿಸಲಾಗಿತ್ತು. ಈ ಯೋಜನೆ ಅಡಿಯಲ್ಲಿ ಶೇಕಡ 35ರಷ್ಟು ಪ್ರದೇಶದಲ್ಲಿ ಪೈಪ್ಲೈನ್ ಅಳಡಿಸಲಾಗಿದೆ. ಕರಗದ ಕುಂಟೆ ಪುನಶ್ಚೇತನಗೊಳಿಸಲಾಗಿದೆ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.