ಸಾವು
ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಟಾರ್ಪಾಲ್ ವಿಚಾರಕ್ಕೆ ಗಲಾಟೆ ನಡೆದು, ಕಾರ್ಮಿಕರೊಬ್ಬರನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಜೆ.ಪಿ. ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸಾರಕ್ಕಿ ಮಾರುಕಟ್ಟೆಯಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.
ರಾಮನಗರ ತಾಲ್ಲೂಕಿನ ನಿವಾಸಿ ಚಿಕ್ಕಣ್ಣ (60) ಕೊಲೆಯಾದ ಕಾರ್ಮಿಕ.
ಬನಶಂಕರಿಯ ಸಾರಕ್ಕಿ ಮಾರುಕಟ್ಟೆ ಯಲ್ಲಿ ಕೂಲಿ ಕೆಲಸ ಮಾಡಿಕೊಂಡು ಎಲ್ಲೆಂದರಲ್ಲಿ ಮಲಗುತ್ತಿದ್ದರು. ಗುರುವಾರ ರಾತ್ರಿ ಮಳೆ ಬಂದ ಪರಿಣಾಮ, ಮಾರುಕಟ್ಟೆ ಸಮೀಪ ದಲ್ಲಿರುವ ನಿರ್ಮಾಣ ಹಂತದ ಕಟ್ಟಡಕ್ಕೆ ಹೋಗಿ ಅಲ್ಲಿದ್ದ ಟಾರ್ಪಾಲ್ ತೆಗೆದು ಕೊಂಡು ಹಾಸಿಕೊಂಡು ಮಲಗಿದ್ದರು.
ಮುಂಜಾನೆ ಬಂದ ಚಿಂದಿ ಆಯುವ ವ್ಯಕ್ತಿಯೊಬ್ಬ ‘ನಾನು ಹಾಸಿಕೊಂಡು ಮಲಗುವ ತಾಡಪಾಲ ಅನ್ನು ನೀನು ಏಕೆ ತೆಗೆದುಕೊಂಡು ಮಲಗಿದ್ದೀಯ’ ಎಂದು ಪ್ರಶ್ನಿಸಿ ಜಗಳ ಮಾಡಿದ್ದ. ಜಗಳ ವಿಕೋಪಕ್ಕೆ ಹೋದಾಗ ಕಟ್ಟಡದಲ್ಲಿದ್ದ ದೊಣ್ಣೆಯೊಂದನ್ನು ತೆಗೆದುಕೊಂಡು ಬಂದಿದ್ದ ಆರೋಪಿ, ಚಿಕ್ಕಣ್ಣ ಅವರ ತಲೆ ಹಾಗೂ ಇನ್ನಿತರ ಭಾಗಗಳ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಹಲ್ಲೆಯಿಂದ ತೀವ್ರ ಗಾಯಗೊಂಡ ಚಿಕ್ಕಣ್ಣ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಜೆ.ಪಿ. ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು. ಕೊಲೆ ಮಾಡಿ ಪರಾರಿಯಾಗಿರುವ ಆರೋಪಿಯ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.