ಕೆ.ಆರ್.ಪುರ: ಸಿಸಿಬಿ ಪೊಲೀಸರ ವೇಷದಲ್ಲಿ ಬಂದು ಅಂಗಡಿ ಮಾಲೀಕರೊಬ್ಬರನ್ನು ಬೆದರಿಸಿ ಮತ್ತು ಅಂಗಡಿಗೆ ಬಂದ ಗ್ರಾಹಕನ ಹಲ್ಲೆ ಮಾಡಿ ₹2 ಸಾವಿರ ಹಣ ಹಾಗೂ ಮೊಬೈಲ್ ಫೋನ್ ದೋಚಿ ಪರಾರಿಯಾಗಿದ್ದ 8 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕೃತ್ಯ ನಡೆದ 12 ಗಂಟೆಗಳೊಳಗೇ ಆರೋಪಿಗಳನ್ನು ಕೆ.ಆರ್. ಪುರ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಬುಧವಾರ ಮಧ್ಯಾಹ್ನ ಸುಮಾರು 3 ಗಂಟೆಯಲ್ಲಿ ರಾಮಮೂರ್ತಿ ನಗರ , ಕಲ್ಕೆರೆ ಮುಖ್ಯ ರಸ್ತೆ , ಪಂಜಾಬ್ ನ್ಯಾಷನಲ್ ಬ್ಯಾಂಕ್ ಎದುರುಗಡೆ ಇರುವ ಸ್ಟೇಷನರಿ ಅಂಗಡಿಗೆ ಕಾರ್ ಮತ್ತು ಬೈಕ್ ಗಳಲ್ಲಿ ಬಂದ ಎಂಟು ಮಂದಿ ಆರೋಪಿಗಳು, ‘ನಿಮ್ಮ ಅಂಗಡಿಯಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಇದೆ. ನಾವು ಸಿಸಿಬಿ ಪೊಲೀಸರು. ಪರಿಶೀಲಿಸಲು ಬಂದಿದ್ದೇವೆ. ₹3 ಲಕ್ಷ ಕೊಟ್ಟರೆ ಬಿಡುತ್ತೇವೆ. ಇಲ್ಲದಿದ್ದರೆ ಅಂಗಡಿಯನ್ನು ಜಪ್ತಿ ಮಾಡಿ ಜೈಲಿಗೆ ಕಳುಹಿಸುತ್ತೇವೆ’ ಎಂದು ಹೆದರಿಸಿದ್ದಾರೆ. ನಂತರ ಸಿಕ್ಕಷ್ಟು ದುಡ್ಡು ಎತ್ತಿಕೊಂಡು ಹೋಗಿದ್ದಾರೆ.
ಈ ಬಗ್ಗೆ ಅಂಗಡಿಯ ಮಾಲೀಕ ನಿಹಾಲ್ ಸಿಂಗ್ ಪೊಲೀಸರಿಗೆ ದೂರು ನೀಡಿದ್ದರು.
ಇನ್ಸ್ಪೆಕ್ಟರ್ ಅಂಬರೀಶ್ ಅವರ ತಂಡ ಆರೋಪಿಗಳನ್ನು ಬಂಧಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.