ADVERTISEMENT

ನಕ್ಷತ್ರ ಆಮೆ ಮಾರಲು ಯತ್ನ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2021, 21:18 IST
Last Updated 16 ನವೆಂಬರ್ 2021, 21:18 IST
ರಕ್ಷಿಸಲ್ಪಟ್ಟ ನಕ್ಷತ್ರ ಆಮೆಗಳು 
ರಕ್ಷಿಸಲ್ಪಟ್ಟ ನಕ್ಷತ್ರ ಆಮೆಗಳು    

ಬೆಂಗಳೂರು: ಎರಡು ಬ್ಯಾಗ್‌ಗಳಲ್ಲಿ 401 ನಕ್ಷತ್ರ ಆಮೆಗಳನ್ನು ಇಟ್ಟುಕೊಂಡು ಮಾರಲು ಯತ್ನಿಸುತ್ತಿದ್ದ ಆರೋಪಿಯನ್ನು ಕಲಾಸಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ತಮಿಳುನಾಡಿನ ಶಿವಗಂಗಾ ಜಿಲ್ಲೆಯ ಬಲಮ್‌ ಸ್ಟ್ರೀಟ್‌ ನಿವಾಸಿ ಮುತ್ತು ಹಮದ್‌ ಮೀರಾ (51) ಬಂಧಿತ ಆರೋಪಿ. ಆತನ ಬಳಿ ಇದ್ದ ಆಮೆಗಳ ಪೈಕಿ 21 ಮೃತಪಟ್ಟಿದ್ದು, 20 ಆಮೆಗಳ ಸ್ಥಿತಿ ಗಂಭೀರವಾಗಿದೆ. ಉಳಿದ 360 ಆಮೆಗಳನ್ನು ರಕ್ಷಿಸಲಾಗಿದೆ. ಬನ್ನೇರುಘಟ್ಟ ಜೈವಿನ ಉದ್ಯಾನದ ಸಿಬ್ಬಂದಿಗೆ ಮಾಹಿತಿ ನೀಡಲಾಗಿದ್ದು, ಅವರಿಗೆಆಮೆಗಳನ್ನು ಒಪ್ಪಿಸಲಾಗುತ್ತದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಠಾಣೆ ವ್ಯಾಪ್ತಿಯ ಎವಿ ರಸ್ತೆಯ ಖಾಸಗಿ ಟ್ರಾವೆಲ್ಸ್‌ವೊಂದರ ಕಚೇರಿ ಬಳಿ ಅಪರಿಚಿತ ವ್ಯಕ್ತಿಯೊಬ್ಬ ಕಪ್ಪು ಹಾಗೂ ಕಂದು ಬಣ್ಣದ ಬ್ಯಾಗ್‌ಗಳಲ್ಲಿ ನಕ್ಷತ್ರ ಆಮೆಗಳನ್ನು ತಂದು ಮಾರಲು ಯತ್ನಿಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ಸ್ಥಳಕ್ಕೆ ತೆರಳಿ ಆರೋಪಿ ಬಳಿ ಇದ್ದ ಬ್ಯಾಗ್‌ಗಳನ್ನು ಪರಿಶೀಲಿಸಿದಾಗ ಅವುಗಳಲ್ಲಿ ಆಮೆಗಳಿದ್ದವು. ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಹೇಳಿದ್ದಾರೆ.

ADVERTISEMENT

‘ಹಲವರು ಈ ಆಮೆಗಳನ್ನು ಮನೆಗಳಲ್ಲಿ ಸಾಕುತ್ತಾರೆ. ಅಂತಹವರಿಗೆ ಅವುಗಳನ್ನು ಮಾರಾಟ ಮಾಡುತ್ತಿದ್ದುದಾಗಿ ಆರೋಪಿಯು ವಿಚಾರಣೆ ವೇಳೆ ತಿಳಿಸಿದ್ದಾನೆ. ಈ ಜಾಲದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಸಾಧ್ಯತೆ ಇದೆ. ಆ ನಿಟ್ಟಿನಲ್ಲೂ ತನಿಖೆ ನಡೆಸಲಾಗುತ್ತಿದೆ’ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.