ADVERTISEMENT

ಕಾಲುವೆ ದಿಕ್ಕು ಬದಲು, ಕಾಮಗಾರಿಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2018, 19:16 IST
Last Updated 9 ಅಕ್ಟೋಬರ್ 2018, 19:16 IST
ಸ್ಥಗಿತಗೊಂಡಿರುವ ಮಳೆನೀರು ಕಾಲುವೆ ಕಾಮಗಾರಿ
ಸ್ಥಗಿತಗೊಂಡಿರುವ ಮಳೆನೀರು ಕಾಲುವೆ ಕಾಮಗಾರಿ   

ಬೆಂಗಳೂರು: ಮಳೆ ನೀರು ಕಾಲುವೆಯ ಸ್ವಾಭಾವಿಕ ದಿಕ್ಕನ್ನು ಬದಲಾಯಿಸಿ, ಬೇರೊಂದು ದಿಕ್ಕಿನಲ್ಲಿ ಹರಿಯುವಂತೆ ಮಾಡಲಾಗುತ್ತಿದೆ ಎಂದು ಸ್ಥಳೀಯರುವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಳಿಸಲಾಗಿದೆ.

ಬೇಗೂರು ರಸ್ತೆ ಮೈಕೋ ಲೇಔಟ್ ಬಳಿ ನಡೆಸುತ್ತಿರುವ ಕಾಮಗಾರಿ ಸ್ಥಗಿತಗೊಂಡಿದೆ.

ಈ ಪ್ರದೇಶ ಪದೇ ಪದೇ ನೆರೆ ಹಾವಳಿಗೆ ಸಿಲುಕುವುದನ್ನು ತಪ್ಪಿಸಲು ಮೂಲ ನಕ್ಷೆ ಆಧರಿಸಿ ಬಿಬಿಎಂಪಿಯ ‘ಮಳೆನೀರು ಕಾಲುವೆ ಘಟಕ’ವು, ಕಾಲುವೆ ನಿರ್ಮಾಣದ ಕೆಲಸ ಕೈಗೆತ್ತಿಕೊಂಡಿದೆ. ‘ನಕ್ಷೆಯ ಪ್ರಕಾರ ಸರ್ವೆ ನಂ. 239ರಲ್ಲಿ ಈ ಕಾಲುವೆ ಹಾದು ಹೋಗುತ್ತದೆ. ಆದರೆ ನಕ್ಷೆಯನ್ನು ಉಲ್ಲಂಘಿಸಿ, ಪ್ರಭಾವಿಯೊಬ್ಬರ ಮನೆಯ ಬಳಿ ಹಾದು ಹೋಗುವುದನ್ನು ತಪ್ಪಿಸಲು ಸರ್ವೆ ನಂ.238ರಲ್ಲಿ ಇರುವ ರಸ್ತೆಗೆ ‘ಝಡ್’ ಆಕಾರದಲ್ಲಿ ತಿರುಗಿಸಲಾಗಿದೆ. ಇದರಿಂದ ರಸ್ತೆಯಲ್ಲಿ ಕಾವೇರಿ ಲೈನ್, ಯುಜಿಡಿ ಸಂರ್ಪಕ ಕಲ್ಪಿಸಲು ಅಡ್ಡಿಯಾಗಲಿದೆ’ ಎಂಬುದು ಸ್ಥಳೀಯರ ಆಕ್ಷೇಪ.

ADVERTISEMENT

‘ನಿಯಮಾವಳಿ ಪ್ರಕಾರ ಕಾಲುವೆಯ ಎರಡೂ ಬದಿಗಳ 25 ಮೀಟರ್ ಒಳಗೆ ಮನೆ-ನಿವೇಶನ ಇರುವಂತಿಲ್ಲ. ನಕ್ಷೆಯನ್ನು ಉಲ್ಲಂಘಿಸಿ ರಸ್ತೆಯಲ್ಲಿ ಕಾಲುವೆ ನಿರ್ಮಿಸುವುದರಿಂದ ರಸ್ತೆಯ ಇಕ್ಕೆಲಗಳಲ್ಲಿರುವ ಆಸ್ತಿಗಳ ಖಾತಾನೋಂದಣಿ, ಖಾತೆ ವರ್ಗಾವಣೆ ಮಾಡಿಕೊಳ್ಳಲು ಹಾಗೂ ಬ್ಯಾಂಕ್ ಸಾಲ ಪಡೆಯಲು ಅಡ್ಡಿಯಾಗುತ್ತದೆ. ಮಾತ್ರವಲ್ಲ, ಮನೆ ಕಟ್ಟಲು ನಕ್ಷೆ ಮಂಜೂರಾತಿ ಪತ್ರ ನೀಡುವುದಿಲ್ಲ’ ಎಂದು ಮೈಕೋ ನಿವಾಸಿಗಳ ಸಂಘ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿದೆ.

‘ಸಾರ್ವಜನಿಕರ ಅನುಕೂಲದ ದೃಷ್ಟಿಯಿಂದ ಮನೆಗಳನ್ನು ಕಟ್ಟಿಕೊಂಡಿದ್ದಲ್ಲಿ, ಕೆಲವೊಮ್ಮೆ ದಿಕ್ಕು ಬದಲಿಸಲಾಗುತ್ತದೆ. ಮಾನವ ನಿರ್ಮಿತ ಕಾಲುವೆಗಳಿಗೆ ಈ ನಿಯಮಾವಳಿ ಅನ್ವಯಿಸುವುದಿಲ್ಲ, ಈ ಬಗ್ಗೆ ನಿವಾಸಿಗಳಿಗೆ ಮನವರಿಕೆ ಮಾಡಿಕೊಡುತ್ತೇವೆ’ ಎನ್ನುತ್ತಾರೆ ಸಹಾಯಕ ಎಂಜಿನಿಯರ್ ತಮ್ಮಯ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.