ಬೆಂಗಳೂರು: ಪತಿಯಿಂದ ದೂರವಾಗಿ ಪ್ರತ್ಯೇಕವಾಗಿ ವಾಸವಿದ್ದ ಮಹಿಳೆಯೊಬ್ಬರ ವಿಚಾರಕ್ಕಾಗಿ ನಡೆದ ಜಗಳದಲ್ಲಿ, ಮಹಿಳೆಯ ಸಂಬಂಧಿ ಪ್ರದೀಪ್ (26) ಎಂಬುವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.
ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯ ವೃಷಭಾವತಿ ನಗರದಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ಆರೋಪಿ ಮನೋಜ್ ಎಂಬಾತ ತಲೆಮರೆಸಿಕೊಂಡಿದ್ದಾನೆ.
‘ಕಳೆದ ವರ್ಷ ಪತಿಯಿಂದ ದೂರವಾಗಿದ್ದ ಮಹಿಳೆ ಕಾಮಾಕ್ಷಿಪಾಳ್ಯದಲ್ಲಿ ಪ್ರತ್ಯೇಕ ಮನೆ ಮಾಡಿಕೊಂಡು ವಾಸವಿದ್ದಾರೆ. ಸಂಬಂಧಿಯೂ ಆಗಿದ್ದ ಕಾರು ಚಾಲಕ ಪ್ರದೀಪ್ ಆಗಾಗ ಮನೆಗೆ ಹೋಗಿ ಬರುತ್ತಿದ್ದರು. ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದ ಮನೋಜ್ ಸಹ ಮಹಿಳೆಯನ್ನು ಮಾತನಾಡಿಸಲು ಮನೆಗೆ ಹೋಗುತ್ತಿದ್ದರು’ ಎಂದು ಪೊಲೀಸರು ಹೇಳಿದರು.
‘ಇತ್ತೀಚೆಗೆ ಮಹಿಳೆ ಮನೆಗೆ ಹೋಗಿದ್ದ ಮನೋಜ್, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಹಲ್ಲೆಗೂ ಯತ್ನಿಸಿದ್ದ. ಈ ವಿಷಯ ಗೊತ್ತಾಗುತ್ತಿದ್ದಂತೆ ಪ್ರದೀಪ್ ಹಾಗೂ ಆತನ ಕೆಲ ಸಂಬಂಧಿಕರು ಭಾನುವಾರ ರಾತ್ರಿ ಮನೋಜ್ನ ಮನೆಗೆ ಹೋಗಿದ್ದರು. ಮಹಿಳೆಯ ತಂಟೆಗೆ ಬಾರದಂತೆ ಬುದ್ಧಿವಾದ ಹೇಳಿದ್ದರು.’
‘ಅಷ್ಟಕ್ಕೆ ಕೋಪಗೊಂಡಿದ್ದ ಮನೋಜ್, ಚಾಕುವಿನಿಂದ ಪ್ರದೀಪ್ ಅವರಿಗೆ ಇರಿದು ಕೊಲೆ ಮಾಡಿದ್ದಾನೆ’ ಎಂದು ಪೊಲೀಸರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.