ಬೆಂಗಳೂರು:‘ಎಲ್ಲ ರಾಜ್ಯಗಳಲ್ಲಿ ಅವರವರ ಭಾಷೆಯೇ ಕಲಿಕಾ ಮಾಧ್ಯಮವಾಗಬೇಕು. ಉತ್ತರ ಭಾರತೀಯರು ದಕ್ಷಿಣದವರ ಮೇಲೆ ಬಲವಂತವಾಗಿ ಹಿಂದಿ ಹೇರಬಾರದು’ ಎಂದು ಹಿರಿಯ ಸಾಹಿತಿ ಪ್ರೊ. ಕಮಲಾ ಹಂಪನಾ ಹೇಳಿದರು.
ತಮ್ಮ ‘ಬೇರು–ಬೆಂಕಿ ಬಿಳಲು’ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ಮಾತೃಭಾಷೆ ಮತ್ತು ಇಂಗ್ಲಿಷ್ ಒಳಗೊಂಡ ದ್ವಿಭಾಷಾ ಸೂತ್ರವೇ ಸಾಕು. ತ್ರಿಭಾಷಾ
ಸೂತ್ರದ ಅಗತ್ಯವಿಲ್ಲ’ ಎಂದು ಅಭಿಪ್ರಾಯಪಟ್ಟರು.
‘ರಾಜ್ಯದಲ್ಲಿ ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಅಧ್ಯಯನ ಮಾಡಬಹುದು. ಆದರೆ, ಕನ್ನಡವೇ ಕಲಿಕಾ ಮಾಧ್ಯಮವಾಗಬೇಕು. ಆದರೆ, ಸರ್ಕಾರಗಳು ಕಲಿಕಾ ಮಾಧ್ಯಮ ವಿಷಯದಲ್ಲಿ ಬೇಕಾದಂತೆ ನಿರ್ಧಾರ ಕೈಗೊಳ್ಳುವ ಮೂಲಕ ಮಕ್ಕಳ ಭವಿಷ್ಯದೊಂದಿಗೆ ನಿರ್ದಯವಾಗಿ ವರ್ತಿಸುತ್ತಿವೆಯೇನೋ ಎನಿಸುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
ಸಾಹಿತಿ ಬರಗೂರು ರಾಮಚಂದ್ರಪ್ಪ, ‘ದೇಶದಲ್ಲಿ ಈಗ ಧರ್ಮದ ದ್ವೀಪಗಳನ್ನು ನಿರ್ಮಾಣ ಮಾಡಲಾ
ಗುತ್ತಿದೆ. ಇದೊಂದು ಅಪಾಯಕಾರಿ ಬೆಳವಣಿಗೆ. ಧರ್ಮ ಎನ್ನುವುದು ಒಂದು ಪ್ರದೇಶಕ್ಕೆ ಸೀಮಿತವಾದುದಲ್ಲ. ವಿವಿಧತೆಯಲ್ಲಿ ಏಕತೆ ನಮ್ಮ ದೇಶದ ಲಕ್ಷಣ’ ಎಂದರು.
ಕೃತಿಯ ಕುರಿತು ಮಾತನಾಡಿದ ಹಿರಿಯ ಸಾಹಿತಿ ಹಂ.ಪ. ನಾಗರಾಜಯ್ಯ, ‘ತಮ್ಮ ಜೀವನದ ಪ್ರಮುಖ ಘಟನೆಗಳನ್ನು ಈ ಕೃತಿಯಲ್ಲಿ ಕಮಲಾ ನೆನಪು ಮಾಡಿಕೊಂಡಿದ್ದಾರೆ. ಮನೆಯ ಮಾಲಿಯ ಮೂಲಕ ಕೃತಿ
ಆರಂಭಿಸಿದ್ದು, ಸಮಾನತೆಗೆ ಒತ್ತು ನೀಡಿದ್ದಾರೆ’ ಎಂದರು.
ಕೃತಿ: ಬೇರು–ಬೆಂಕಿ ಬಿಳಲು
ಲೇಖಕರು: ಪ್ರೊ.ಕಮಲಾ ಹಂಪನಾ
ಪ್ರಕಾಶಕರು: ಸಪ್ನ ಬುಕ್ ಹೌಸ್
ಬೆಲೆ: ₹595
ಪುಟಗಳು: 600
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.