
ಯಲಹಂಕ: ‘ವಿಶಿಷ್ಟ ಶೈಲಿಯ ಕೀರ್ತನೆಗಳು ಮತ್ತು ಕೃತಿಗಳ ಮೂಲಕ ಸಮಾಜಕ್ಕೆ ಭಕ್ತಿ, ಸಮಾನತೆ ಮತ್ತು ಸಾಮಾಜಿಕ ಸುಧಾರಣೆಯ ಸಂದೇಶಗಳನ್ನು ಸಾರಿದ ಮಹಾಪುರುಷ ಕನಕದಾಸರುʼ ಎಂದು ಹೊಸದುರ್ಗ ಶಾಖಾಮಠ ಕನಕಗುರು ಪೀಠದ ಈಶ್ವರಾನಂದಪುರಿ ಸ್ವಾಮೀಜಿ ಬಣ್ಣಿಸಿದರು.
ಕರ್ನಾಟಕ ಪ್ರದೇಶ ಕುರುಬರ ಸಂಘದ ಆಶ್ರಯದಲ್ಲಿ ಚಿಕ್ಕಬೊಮ್ಮಸಂದ್ರದಲ್ಲಿ ಆಯೋಜಿಸಿದ್ದ 538ನೇ ಕನಕ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ಕನಕದಾಸರ ಜೀವನ ಮತ್ತು ಬೋಧನೆಗಳು ಸಮಾಜಕ್ಕೆ ಇಂದಿಗೂ ಪ್ರಸ್ತುತ ಮತ್ತು ಸ್ಫೂರ್ತಿಯಾಗಿವೆ ಎಂದರು.
ಶಾಸಕ ಎಸ್.ಆರ್.ವಿಶ್ವನಾಥ್ ಹಾಗೂ ಐದು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿಯ ಅಧ್ಯಕ್ಷ ಎಚ್.ಎಂ.ರೇವಣ್ಣ ಮಾತನಾಡಿದರು. ಸಮಾಜದ ಹಿರಿಯ ಗಣ್ಯರು ಹಾಗೂ ಸ್ಥಳೀಯ ಮುಖಂಡರನ್ನು ಸನ್ಮಾನಿಸಲಾಯಿತು.
ಕಾಗಿನೆಲೆ ಕನಕ ಶ್ರೀ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕಿನ ಯಲಹಂಕ ಶಾಖೆಗೆ ಚಾಲನೆ ನೀಡಲಾಯಿತು. ಬ್ಯಾಂಕಿನ ಅಧ್ಯಕ್ಷ ದೇವರಾಜ ಸುಬ್ಬರಾಯಪ್ಪ, ಉಪಾಧ್ಯಕ್ಷ ಕೃಷ್ಣಪ್ಪ.ಎಚ್.ಆರ್, ನಿರ್ದೇಶಕ ಎಂ.ಮುನಿರಾಜು ಉಪಸ್ಥಿತರಿದ್ದರು.
ಬೈಕ್ ರ್ಯಾಲಿ: ಕನಕ ಜಯಂತ್ಯುತ್ಸವದ ಪ್ರಯುಕ್ತ ಸಂಗೊಳ್ಳಿ ರಾಯಣ್ಣ ಯುವಸೇನೆಯ ಕಾರ್ಯಕರ್ತರು, ಚಿಕ್ಕಬೊಮ್ಮಸಂದ್ರ ಮತ್ತು ಯಲಹಂಕ ಉಪನಗರದ ಪ್ರಮುಖ ಬೀದಿಗಳಲ್ಲಿ ಬೈಕ್ ರ್ಯಾಲಿ ನಡೆಸಿದರು.
ಮೆರವಣಿಗೆ: ಕನಕದಾಸರ ಪುತ್ಥಳಿಯನ್ನು ಬೆಳ್ಳಿರಥದಲ್ಲಿಟ್ಟು, ಚಿಕ್ಕಬೊಮ್ಮಸಂದ್ರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ವಿವಿಧ ಜಾನಪದ ಕಲಾತಂಡಗಳು ಪ್ರದರ್ಶನ ನೀಡಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.