ADVERTISEMENT

ಕನಕದಾಸರ ಆದರ್ಶಗಳನ್ನು ಅಳವಡಿಸಿಕೊಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ಮೂರು ದಿನಗಳ ಕನಕ ನಡೆ–ನುಡಿ ಉತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 23:03 IST
Last Updated 16 ಅಕ್ಟೋಬರ್ 2025, 23:03 IST
<div class="paragraphs"><p>ನಗರದ ಕಲಾಗ್ರಾಮ, ಮಲ್ಲತ್ತಹಳ್ಳಿದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ‘ಕನಕ ಕಾವ್ಯ ದೀವಿಗೆ’ ಮೂರು ದಿನಗಳ ಕನಕ ನಡೆ–ನುಡಿ ಉತ್ಸವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನಕದಾಸರ ತಂಬೂರಿಯನ್ನು ನುಡಿಸಿದರು. </p></div>

ನಗರದ ಕಲಾಗ್ರಾಮ, ಮಲ್ಲತ್ತಹಳ್ಳಿದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ‘ಕನಕ ಕಾವ್ಯ ದೀವಿಗೆ’ ಮೂರು ದಿನಗಳ ಕನಕ ನಡೆ–ನುಡಿ ಉತ್ಸವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನಕದಾಸರ ತಂಬೂರಿಯನ್ನು ನುಡಿಸಿದರು.

   

ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಕನಕದಾಸರ ಆದರ್ಶಗಳ ಬಗ್ಗೆ ಕೇಳಿ ಮರೆಯದೆ, ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 

ADVERTISEMENT

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ, ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಜಂಟಿಯಾಗಿ ನಗರದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ‘ಕನಕ‌ ಕಾವ್ಯ ದೀವಿಗೆ’ ಕನಕ ನಡೆ–ನುಡಿ ಉತ್ಸವಕ್ಕೆ ಗುರುವಾರ ಚಾಲನೆ ನೀಡಿ, ಮಾತನಾಡಿದರು. 

‘16ನೇ ಶತಮಾನದಲ್ಲಿ ಪಾಳೇಗಾರರ ಕುಟುಂಬದಲ್ಲಿ ಜನಿಸಿದ ಕನಕದಾಸರು ಸಂತರಾದರು. ಕವಿ, ದಾರ್ಶನಿಕ, ಸಾಮಾಜಿಕ ಹೋರಾಟಗಾರರೂ ಆಗಿದ್ದರು. ಸಮಾಜದ ಅಸಮಾನತೆ ವಿರುದ್ಧ ಬಂಡಾಯ ಹೂಡಿದರು. ಬುದ್ದ, ಬಸವ, ನಾರಾಯಣಗುರು ಮತ್ತು ಕನಕದಾಸರು ಜಾತಿ ವ್ಯವಸ್ಥೆ ಹಾಗೂ ವರ್ಗ ವ್ಯವಸ್ಥೆ ಹೋಗಲಾಡಿಸಲು ಶ್ರಮಿಸಿದರು’ ಎಂದು ವಿವರಿಸಿದರು.

‘ಯಾವ ದೇವಸ್ಥಾನಕ್ಕೆ ನಿಮ್ಮನ್ನು ಬಿಡುವುದಿಲ್ಲವೊ ಆ ದೇವಸ್ಥಾನಕ್ಕೆ ಹೋಗಬೇಡಿ. ನಿಮ್ಮದೇ ದೇವರುಗಳಿಗೆ ನಿಮ್ಮದೇ ದೇವಸ್ಥಾನ ಕಟ್ಟಿಸಿ ಎಂದು ನಾರಾಯಣಗುರು ಕರೆ ನೀಡಿದ್ದರು. ನಿಮ್ಮನ್ನು ಯಾವ ದೇವಸ್ಥಾನಕ್ಕೆ ಸೇರಿಸುವುದಿಲ್ಲವೋ ಆ ದೇವಸ್ಥಾನಕ್ಕೆ ಹೋಗಿ ಇಣುಕುವ ಅಗತ್ಯ ಏನಿದೆ? ಹೊರಗೇ ನಿಂತು ಕೈ ಮುಗಿಯುವುದಕ್ಕಿಂತ ನಿಮ್ಮದೇ ಗುಡಿ ನಿರ್ಮಿಸಿ ಎನ್ನುವ ನಾರಾಯಣಗುರು ಅವರ ಆದರ್ಶ ಪಾಲನೆ ಆಗಬೇಕು’ ಎಂದರು.

‘16ನೇ ಶತಮಾನದಲ್ಲಿ ಕನಕದಾಸರು ‘ಕುಲ ಕುಲ ಕುಲ ಎಂದು ಹೊಡೆದಾಡದಿರಿ’ ಎಂದರು. 12ನೇ ಶತಮಾನದಲ್ಲಿ ಬಸವಣ್ಣ ಅವರು ‘ಇವನಾರವ ಇವನಾರವ ಇವನಾರವ ನೆಂದಿನಸದಿರಯ್ಯಾ...’ ಎಂದು ಹೇಳಿದರು. ಆದರೆ, ಇವತ್ತಿಗೂ ಕುಲ ಮತ್ತು ಜಾತಿ ತಾರತಮ್ಯ ಆಚರಣೆಯಲ್ಲಿದೆ’ ಎಂದು ಹೇಳಿದರು.

‘ಜಾತಿ ವ್ಯವಸ್ಥೆಗೆ ಪಟ್ಟಭದ್ರರು ಇನ್ನೂ ನೀರೆರೆಯುತ್ತಲೇ ಇದ್ದಾರೆ. ಹೀಗಾಗಿ, ಸಮಾಜದ ಬದಲಾವಣೆಗೆ ಧೈರ್ಯ ಬೇಕಾಗುತ್ತದೆ. ವೈಜ್ಞಾನಿಕತೆ, ವೈಚಾರಿಕತೆಯ ಶಕ್ತಿಯಿಂದ ಸಮಾಜದ ಅಸಮಾನತೆ ಅಳಿಸಬೇಕು’ ಎಂದರು.

ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಶಾಸಕರಾದ ಮುನಿರತ್ನ, ಎನ್.ಎಚ್. ಕೋನರಡ್ಡಿ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ, ಸಂತಕವಿ ಕನಕದಾಸ  ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ. ಚಿಕ್ಕಣ್ಣ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್, ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಅಧ್ಯಕ್ಷ ಚನ್ನಪ್ಪಕಟ್ಟಿ, ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ, ಬಂಜಾರ ಅಕಾಡೆಮಿ ಅಧ್ಯಕ್ಷ ಗೋವಿಂದಸ್ವಾಮಿ, ಇಲಾಖೆ ನಿರ್ದೇಶಕಿ ಕೆ.ಎಂ.ಗಾಯಿತ್ರಿ ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.