
ಬೆಂಗಳೂರು: ‘ಕ್ಯಾಥೊಲಿಕ್ ಚರ್ಚ್ಗಳು ಕನ್ನಡವನ್ನು ನಿರ್ಲಕ್ಷಿಸುತ್ತಿರುವುದರಿಂದ ಕನ್ನಡ ಕ್ಯಾಥೊಲಿಕ್ ಕ್ರೈಸ್ತರು ಕನ್ನಡ ನೆಲದಲ್ಲಿಯೇ ಪರಕೀಯರಾಗಿದ್ದಾರೆ’ ಎಂದು ಅಖಿಲ ಕರ್ನಾಟಕ ಕಥೋಲಿಕ್ ಕ್ರೈಸ್ತರ ಕನ್ನಡ ಸಂಘ ತಿಳಿಸಿದೆ.
ಕನ್ನಡ ಕ್ಯಾಥೊಲಿಕ್ ನ್ಯಾಯಸಮ್ಮತ ಬೇಡಿಕೆಗಳ ಬಗ್ಗೆ ನಿರಂತರವಾಗಿ ಮನವಿ ಮಾಡಿದ್ದರೂ ಚರ್ಚ್ ನಾಯಕತ್ವ ಕಿವಿಗೊಡುತ್ತಿಲ್ಲ. ಕಾನ್ಫರೆನ್ಸ್ ಆಫ್ ಕ್ಯಾಥೊಲಿಕ್ ಬಿಷಪ್ಸ್ ಆಫ್ ಇಂಡಿಯಾ (ಸಿಸಿಬಿಐ), ಕ್ಯಾಥೊಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾ (ಸಿಬಿಸಿಐ) ನಾಯಕರು ಕರ್ನಾಟಕದ ವಾಸ್ತವ ಪರಿಸ್ಥಿತಿಯನ್ನು ಅರಿಯುತ್ತಿಲ್ಲ. ಸ್ಥಳೀಯರ ನೋವಿಗೆ ಸ್ಪಂದಿಸುತ್ತಿಲ್ಲ ಎಂದು ಸಂಘದ ಅಧ್ಯಕ್ಷ ಎ. ಐಸಾಕ್, ಕಾರ್ಯದರ್ಶಿ ಬಾರ್ತಲೋಮಿಯೊ, ಖಜಾಂಚಿ ಜಾರ್ಜ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ಕರಾವಳಿ ಪ್ರದೇಶದ ಎಲಿಟ್ ವರ್ಗಗಳು ಚರ್ಚ್ ವ್ಯವಸ್ಥೆಯನ್ನು ಹಿಡಿತದಲ್ಲಿಟ್ಟುಕೊಂಡು ಕನ್ನಡಿಗರಾದ ಕ್ರೈಸ್ತರನ್ನು ಕನ್ನಡದ ನೆಲದಲ್ಲಿಯೇ ಅಂಚಿಗೆ ತಳ್ಳುತ್ತಿದ್ದಾರೆ. ಇದರಿಂದ ಸುವಾರ್ತಾ ಕಾರ್ಯ ದುರ್ಬಲಗೊಂಡಿದೆ. ಬಿಷಪ್ ಬೆಂಗಳೂರಿಗೆ ಬಂದಿದ್ದರೂ ಇಲ್ಲಿನ ಜನರ ಅಳಲಿಗೆ ಕಿವಿಕೊಡದೇ ಹಿಂತಿರುಗಿದ್ದಾರೆ. ಬೇರೆ ರಾಜ್ಯಗಳಿಗೆ ಭೇಟಿ ನೀಡಿದಾಗ ಅಲ್ಲಿನ ಭಾಷೆ, ಸಂಸ್ಕೃತಿ, ಪರಂಪರೆ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿಸಿಬಿಐ, ಸಿಬಿಸಿಐಗಳು ಕರ್ನಾಟಕದ ವಿಷಯಗಳನ್ನು ನಿರ್ಲಕ್ಷಿಸಬಾರದು ಎಂದು ಹೇಳಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.