ADVERTISEMENT

ಬ್ಯಾಂಕ್‌ ಆಫ್ ಬರೋಡದಲ್ಲಿ ಕನ್ನಡ ಕಡೆಗಣನೆ: ಟಿ.ಎಸ್.ನಾಗಾಭರಣ

ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಟಿ.ಎಸ್.ನಾಗಾಭರಣ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2022, 16:41 IST
Last Updated 15 ಮಾರ್ಚ್ 2022, 16:41 IST
ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್ಲ, ಟಿ.ಎಸ್. ನಾಗಾಭರಣ ಹಾಗೂ ಸುಧಾಕರ್ ನಾಯಕ್ ಇದ್ದಾರೆ. 
ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್ಲ, ಟಿ.ಎಸ್. ನಾಗಾಭರಣ ಹಾಗೂ ಸುಧಾಕರ್ ನಾಯಕ್ ಇದ್ದಾರೆ.    

ಬೆಂಗಳೂರು: ಬ್ಯಾಂಕ್ ಆಫ್ ಬರೋಡದ ಬೆಂಗಳೂರು ವಲಯ ಕಚೇರಿಯಲ್ಲಿ ನಾಮಫಲಕ, ಸೂಚನಾಫಲಕ ಸೇರಿದಂತೆ ವಿವಿಧೆಡೆ ಕನ್ನಡವನ್ನು ಕಡೆಗಣಿಸಿ, ಇಂಗ್ಲಿಷ್ ಭಾಷೆಯನ್ನು ಮಾತ್ರ ಬಳಸುತ್ತಿರುವುದಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದಅಧ್ಯಕ್ಷ ಟಿ.ಎಸ್. ನಾಗಾಭರಣ ಕಿಡಿಕಾರಿದರು.

ಸಂಸ್ಥೆಯಲ್ಲಿ ಕನ್ನಡ ಅನುಷ್ಠಾನದ ಕುರಿತ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಂಗಳವಾರ ಅಧಿಕಾರಿಗಳನ್ನುಈ ಕುರಿತು ತರಾಟೆಗೆ ತೆಗೆದುಕೊಂಡರು.

‘ಕನ್ನಡ ಅನುಷ್ಠಾನದ ವಿಚಾರದಲ್ಲಿ ಬ್ಯಾಂಕಿನ ಸಿಬ್ಬಂದಿ ಹಿಂದೇಟು ಹಾಕುತ್ತಿದ್ದಾರೆ ಎಂಬ ಕುರಿತು ಹಲವಾರು ದೂರುಗಳು ಪ್ರಾಧಿಕಾರಕ್ಕೆ ಬಂದಿವೆ. ಈ ಬ್ಯಾಂಕಿನ ಶಾಖೆಗಳು ಗ್ರಾಮೀಣ ಭಾಗದಲ್ಲೂ ಇದ್ದು, ಅಲ್ಲಿ ಚಲನ್, ಚೆಕ್‌ ಹಾಗೂ ಬ್ಯಾಂಕಿಗೆ ಸಂಬಂಧಿಸಿದ ವಿವಿಧ ಅರ್ಜಿ ಪ್ರತಿಗಳು ಇಂಗ್ಲಿಷ್‌ನಲ್ಲಿರುವುದರಿಂದ ಗ್ರಾಹಕರಿಗೆ ಸಮಸ್ಯೆಯಾಗುತ್ತಿದೆ. ಬ್ಯಾಂಕಿನ ವೆಬ್‌ ಪೋರ್ಟಲ್‌ನಲ್ಲಿ ಕನ್ನಡ ಭಾಷೆಯ ಆಯ್ಕೆಯೇ ಇಲ್ಲ. ಕನ್ನಡ ಅನುಷ್ಠಾನಕ್ಕೆ ಹಿಂದೇಟು ಹಾಕುತ್ತಿರುವ ಅಧಿಕಾರಿಗಳ ವಿರುದ್ಧ ಪ್ರಾಧಿಕಾರ ಕಠಿಣ ಕ್ರಮ ಕೈಗೊಳ್ಳಲಿದೆ’ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಬ್ಯಾಂಕ್ ಆಫ್ ಬರೋಡದ ಬೆಂಗಳೂರು ವಲಯ ಕಚೇರಿಯ ಮಹಾಪ್ರಬಂಧಕ ಸುಧಾಕರ್ ನಾಯಕ್, ‘ರಾಜ್ಯಕ್ಕೆ ಸಂಬಂಧಿಸಿದಂತೆ ಬ್ಯಾಂಕ್‌ ಬೆಂಗಳೂರು ವಲಯ ಕಚೇರಿ ಹಾಗೂ ಮಂಗಳೂರು ವಲಯ ಕಚೇರಿ ಹೊಂದಿದೆ. ಬೆಂಗಳೂರು ವಲಯಕ್ಕೆ ಸಂಬಂಧಿಸಿದಂತೆ 9 ಜಿಲ್ಲೆಗಳಲ್ಲಿರುವ ಎಲ್ಲ ಶಾಖೆಗಳಲ್ಲೂ ಎರಡರಿಂದ ಮೂರು ದಿನಗಳಲ್ಲಿ ಸೂಚನಾ ಫಲಕ ಮತ್ತು ನಾಮಫಲಕಗಳು ಕನ್ನಡದಲ್ಲಿರುವಂತೆ ಕ್ರಮ ವಹಿಸಲಾಗುವುದು. ಚಲನ್ ಮತ್ತು ಚೆಕ್‌ಗಳಲ್ಲಿ ಕನ್ನಡ ಬಳಕೆಗೆ ಸಂಬಂಧಿಸಿದಂತೆ ಎಲ್ಲ ಶಾಖೆಗಳ ಅಧಿಕಾರಿಗಳಿಗೆ ಸೂಚಿಸಲಾಗುವುದು. ಎರಡು ತಿಂಗಳಲ್ಲಿ ವೆಬ್‌ಸೈಟ್‌ನಲ್ಲಿಯೂ ಕನ್ನಡ ಭಾಷೆಯ ಆಯ್ಕೆ ನೀಡಲಾಗುವುದು’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.