ಬೆಂಗಳೂರು: ‘ಹಿಂದಿ’ ಕಟೌಟ್ ಕಿತ್ತು ಹಾಕಿದ್ದ ಪ್ರಕರಣದಿಂದ ಸುದ್ದಿಯಾಗಿದ್ದ ಜೈನ ಸಮುದಾಯದವರ ‘ಗಣೇಶ್ ಬಾಗ್’ ಕಟ್ಟಡದ ಪ್ರವೇಶ ದ್ವಾರದಲ್ಲಿ ಇದೀಗ ಕನ್ನಡದ ಕಟೌಟ್ ರಾರಾಜಿಸುತ್ತಿದೆ.
‘ಕಟ್ಟಡದ ಕಟೌಟ್ನಲ್ಲಿ ಕೇವಲ ಹಿಂದಿ ಭಾಷೆ ಪದಗಳನ್ನು ಹಾಕಲಾಗಿದೆ’ ಎಂದು ಆರೋಪಿಸಿದ್ದ‘ಕರ್ನಾಟಕ ರಕ್ಷಣಾ ಸೇನೆ’ ಸಂಘಟನೆ ಕಾರ್ಯಕರ್ತರು, ಇದೇ 16ರಂದು ಕಟ್ಟಡದ ಮೇಲೆ ದಾಳಿ ಮಾಡಿದ್ದರು. ‘ಹಿಂದಿ’ ಕಟೌಟ್ ಕಿತ್ತು ಹಾಕಿದ್ದರು. ಆ ಸಂಬಂಧ ಆರು ಕಾರ್ಯಕರ್ತರನ್ನು ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಬಂಧಿಸಿದ್ದರು.
ಈ ಪ್ರಕರಣ ನಾಡು, ರಾಜಕೀಯ ಹಾಗೂ ಧರ್ಮದ ಆಯಾಮ ಪಡೆದಿತ್ತು. ಪರ–ವಿರೋಧದ ಬಗ್ಗೆ ರಾಜಕೀಯ ಮುಖಂಡ ಹೇಳಿಕೆ ನೀಡಿದ್ದರು. ಕನ್ನಡಿಗರ ಮೇಲೆ ದೌರ್ಜನ್ಯ ನಡೆದಿರುವುದಾಗಿ ಆರೋಪಿಸಿ ಕನ್ನಡಪರ ಸಂಘಟನೆಗಳೂ ಪ್ರತಿಭಟನೆ ನಡೆಸಿದ್ದವು.
ಈ ಬೆಳವಣಿಗೆಯಿಂದ ಎಚ್ಚೆತ್ತ ಗಣೇಶ್ ಬಾಗ್ ಕಟ್ಟಡದ ಆಡಳಿತ ಮಂಡಳಿ, ಇದೀಗ ಹೊಸ ಕಟೌಟ್ ಅಳವಡಿಸಿದೆ. ‘ಗುರು ಆನಂದ್ ಚಾತುರ್ಮಾಸ ಸಮಿತಿ – 2019, ಬೆಂಗಳೂರು ತಮಗೆ ಸುಸ್ವಾಗತವನ್ನು ಕೋರುತ್ತಿದೆ’ ಎಂದು ಕನ್ನಡದಲ್ಲಿ ಬರೆಯಲಾಗಿದೆ. ಅದರ ಕೆಳಗೆಯೇ ಹಿಂದಿ ಅಕ್ಷರಗಳನ್ನು ಸಹ ಮುದ್ರಿಸಲಾಗಿದೆ. ಈ ಹಿಂದೆ ಹೋರಾಟಗಾರರು ಕಿತ್ತು ಹಾಕಿದ್ದ ಕಟೌಟ್ನ ಭಾಗವನ್ನು ಹಾಗೇ ಬಿಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.