ADVERTISEMENT

ಮೌಲ್ಯಯುತ 20 ಕೃತಿಗಳು ಬಿಡುಗಡೆಗೆ ಸಿದ್ಧ

ಕನ್ನಡ ಪುಸ್ತಕ ಪ್ರಾಧಿಕಾರದಿಂದ ಹೊಸ ಪ್ರಕಟಣೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2019, 20:17 IST
Last Updated 14 ಜೂನ್ 2019, 20:17 IST
ಕನ್ನಡ ಪುಸ್ತಕ ಪ್ರಾಧಿಕಾರ
ಕನ್ನಡ ಪುಸ್ತಕ ಪ್ರಾಧಿಕಾರ   

ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿ ಕಾರವು ಹಿರಿಯ ಸಾಹಿತಿಗಳ ಮೌಲ್ಯ ಯುತ 20 ಕೃತಿಗಳನ್ನು ಪ್ರಕಟಿಸಲು ಸಿದ್ಧತೆ ನಡೆಸಿದೆ. ಇದೇ 20ರಂದು ಕೃತಿಗಳು ಲೋಕಾರ್ಪಣೆಗೊಳ್ಳಲಿವೆ.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾಹಿತಿ ನೀಡಿದ ಪ್ರಾಧಿಕಾರದ ಅಧ್ಯಕ್ಷೆ ವಸುಂಧರಾ ಭೂಪತಿ, ‘ಸಾಹಿತಿ ಟಿ.ಎಸ್.ವೆಂಕಣ್ಣಯ್ಯ ಸಾಹಿತ್ಯ ಸಂಪುಟವನ್ನು ಪ್ರಾಧಿಕಾರ ಪ್ರಕಟಿಸಲಿದೆ. ಈ ಸಂಶೋಧನಾ ಗ್ರಂಥ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ. ಪು.ತಿ.ನ ಹಾಗೂ ತೀ.ನಂ.ಶ್ರೀ ಸಮಗ್ರ ಗದ್ಯಗಳ ಕೃತಿ ಯನ್ನು ಮರುಮುದ್ರಿಸಲಾಗಿದೆ. ಆರು ವರ್ಷಗಳಿಂದ ಈ ಕೃತಿಗಳ ಪ್ರತಿಗಳು ಮಾರಾಟಕ್ಕೆ ಲಭ್ಯವಿರಲಿಲ್ಲ’ ಎಂದರು.

ಡಾ. ಸಿದ್ಧಲಿಂಗಯ್ಯ ಅವರ ಸಮಗ್ರ ಸಾಹಿತ್ಯದ ನಾಲ್ಕು ಸಂಪುಟ, ಎಲ್.ಹನುಮಂತಯ್ಯ ಅವರ ಸಮಗ್ರ ಸಾಹಿತ್ಯದ ಎರಡು ಸಂಪುಟ, ಬಿ.ಟಿ.ಲಲಿತಾ ನಾಯಕ್‍ ಅವರ ಸಮಗ್ರ ಸಾಹಿತ್ಯದ ಎರಡು ಸಂಪುಟ, ಮೂಡ್ನಾ ಕೂಡು ಚಿನ್ನಸ್ವಾಮಿ ಅವರ ಸಮಗ್ರ ಸಾಹಿತ್ಯದ ಒಂದು ಸಂಪುಟಗಳೂ ಈ ಪ್ರಕಟಣೆಗಳಲ್ಲಿ ಸೇರಿವೆ ಎಂದು ತಿಳಿಸಿದರು.

ADVERTISEMENT

ಸಹಾಯಧನಕ್ಕೆ ಆಹ್ವಾನ:ಯುವ ಲೇಖಕರ ಚೊಚ್ಚಲ ಕೃತಿಗಳಿಗೆ ಧನಸಹಾಯ ಯೋಜನೆಯಡಿ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. ಪ್ರೌಢಶಾಲೆಗಳಿಂದ ಅಚ್ಚುಮೆಚ್ಚಿನ ಪುಸ್ತಕ ಯೋಜನೆಗೆ ಅರ್ಜಿ ಕರೆಯಲಾಗಿದೆ. ಆರೋಗ್ಯ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದ 25 ಕೃತಿಗಳು ಹಾಗೂ ಎಂ.ಗೋಪಾಲಕೃಷ್ಣ ಅಡಿಗ, ಟಿ.ಸುನಂದಮ್ಮ, ವಾಣಿ ಮುಂತಾದವರ ಆಯ್ದ ಕೃತಿಗಳ ಸಾಹಿತ್ಯ ವಾಚಿಕೆ ಮುದ್ರಣ ಹಂತದಲ್ಲಿವೆ ಎಂದು ವಿವರಿಸಿದರು.

ವಿಶೇಷ ಘಟಕ ಯೋಜನೆಯಡಿಈ ವರ್ಷ ಪರಿಶಿಷ್ಟ ಜಾತಿ ಜತೆಗೆ ಪರಿಶಿಷ್ಟ ಪಂಗಡದ ಸಾಹಿತಿಗಳ ಕೃತಿಗಳ ಮುದ್ರಣಕ್ಕೆ ಧನಸಹಾಯ ನೀಡಲಾಗುವುದು ಎಂದರು.

ಮಾರಾಟ ಮೇಳ: ಮಂಗಳೂರು, ಕಲಬುರ್ಗಿ, ಬೆಳಗಾವಿಯಲ್ಲಿ ಪುಸ್ತಕ ಮಾರಾಟ ಮೇಳವನ್ನು ಅಕ್ಟೋಬರ್-ನವೆಂಬರ್‌ನಲ್ಲಿ ಏರ್ಪಡಿಸಲಾಗುವುದು. ಪ್ರಕಾಶಕರ 2ನೇ ಸಮ್ಮೇಳನವನ್ನು ಧಾರವಾಡದಲ್ಲಿ ಅಕ್ಟೋಬರ್‌ನಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ ಎಂದರು. ‘ಸಗಟು ಖರೀದಿ ಯೋ ಜನೆಯಡಿ 2016ನೇ ಸಾಲಿನಲ್ಲಿ ಸುಮಾರು 2,500 ಕೃತಿಗಳು ಬಂದಿವೆ. ಪರಿಶೀಲನಾ ಸಮಿತಿ ರಚಿಸಲಾಗಿದ್ದು, ಸದ್ಯದಲ್ಲೇ ಆಯ್ಕೆ ಪ್ರಕ್ರಿಯೆ ಅಂತಿಮಗೊಳ್ಳಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.