ಬೆಂಗಳೂರು: ‘ಮಾನವೀಯತೆ ಎನ್ನುವುದು ಕಾರ್ಮೋಡಗಳ ನಡುವೆ ಇರುವ ಬೆಳ್ಳಿ ರೇಖೆಯಂತೆ. ಮಾನವೀಯತೆ ಹೆಚ್ಚಿದಷ್ಟು ವಿಶ್ವ ಸಹನೀಯವಾದ ಸ್ಥಳವಾಗಲಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
ಕೋವಿಡ್–19 ಸಂದರ್ಭದಲ್ಲಿನ ಹೋರಾಟದ ಕಥೆಗಳ ಬಗ್ಗೆ ಅದಮ್ಯ ಚೇತನ ಹೊರತಂದಿರುವ ‘ಕಾರ್ಮೋಡಗಳ ನಡುವೆ’ ಪುಸಕ್ತವನ್ನು ಶನಿವಾರ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
‘ಪ್ರತಿ ವಿಚಾರದಲ್ಲಿಯೂ ಮಾನವೀಯತೆಗೆ ಪ್ರಾಮುಖ್ಯತೆ ನೀಡಬೇಕು. ದುಃಖದಲ್ಲಿಯೂ ಸಾಧಿಸಿ ಜಯಿಸಬಹುದು ಎಂಬ ಪಾಠವನ್ನು ಆಪತ್ಕಾಲ ನಮಗೆ ಕಲಿಸುತ್ತದೆ’ ಎಂದು ತಿಳಿಸಿದರು.
‘ಕೋವಿಡ್ ಸಂದರ್ಭದಲ್ಲಿ ಎಲೆಮರೆಯ ಕಾಯಿಯಂತೆ ಜನರ ಸಹಾಯಕ್ಕೆ ಅನೇಕರು ಮುಂದಾಗಿದ್ದಾರೆ. ಅವರ ಪೈಕಿ ಹಲವು ಕಥೆಗಳನ್ನು ಪುಸ್ತಕದಲ್ಲಿ ದಾಖಲಿಸಿರುವುದು ಶ್ಲಾಘನೀಯ. ಸಂಕಷ್ಟದ ಸಮಯದಲ್ಲಿ ಸಮಾಜ ಸ್ಪಂದಿಸಬೇಕು. ಈ ಕಾರಣಕ್ಕಾಗಿಯೇ ನಾಗರಿಕ ಸಂಘಗಳು ಹುಟ್ಟಿಕೊಳ್ಳಬೇಕು. ಜನಾಭಿಪ್ರಾಯ ರೂಪಿಸಲು, ನಾಗರಿಕಸಂಘಗಳ ಅಗತ್ಯವಿದೆ’ ಎಂದು ಹೇಳಿದರು.
ಕೋವಿಡ್–19 ಸಂದರ್ಭದಲ್ಲಿ ಸಂಕಷ್ಟಗಳು, ಹೋರಾಟದ ಕಥೆಗಳನ್ನು ಪ್ರಣಿತಾ ಸುಭಾಷ್ ಮತ್ತು ಐಶ್ವರ್ಯಾ ಅನಂತಕುಮಾರ್ ಮತ್ತು ಶರಣ ಸೆಟ್ಟಿ ಅವರು ಈ ಪುಸ್ತಕದ ಮೂಲಕ ತೆರೆದಿಟ್ಟಿದ್ದಾರೆ.
ಶಾಂತಾರಾಮ್ ಸಿದ್ಧಿ, ತೇಜಸ್ವಿನಿ ಅನಂತಕುಮಾರ್, ವಿನಾಯಕ್ ಭಟ್ ಮುರೂರು, ಅಭಿಷೇಕ್ ಅಯ್ಯಂಗಾರ್, ಕೃತಿ ಕಾರಂತ್, ಎಂ.ಸಿ.ವಿನಯಕುಮಾರ್, ಸಂಯುಕ್ತಾ ಹೊರನಾಡು, ಚೈತ್ರಾ ಎಂ.ಎಸ್, ತನ್ಮಯ ಪ್ರಕಾಶ್, ರಾಜೇಶ ಪದ್ಮಾರ್, ಭಾಸ್ಕರ್ ರಾವ್ ಮತ್ತು ಗೌತಮ್ ಗೌಡ ಮುಂತಾದವರು ತಮ್ಮ ಅನುಭವಗಳನ್ನು ಈ ಕೃತಿಯಲ್ಲಿ ಹಂಚಿಕೊಂಡಿದ್ದಾರೆ. ಈ ಪುಸ್ತಕದಿಂದ ಸಂಗ್ರಹಿಸಿದ ಹಣವನ್ನು ಸಂಕಷ್ಟದ ಸಮಯದಲ್ಲಿ ಸಮಾಜಕ್ಕೆ ಮರಳಿ ನೀಡಲು ನಿರ್ಧರಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.