ಬೆಂಗಳೂರು: ‘ಅನಿಶ್ಚಿತತೆ (ಅನ್ಸರ್ಟೈನಿಟಿ)’ ಎಂಬ ವಿಚಾರ ಇಟ್ಟುಕೊಂಡು ‘ವುಡ್ಕಟ್ ಪ್ರಿಂಟ್ಸ್- 2021’ ಎಂಬ ವಿಶೇಷ ಪ್ರದರ್ಶನವನ್ನು ಕರ್ನಾಟಕ ಚಿತ್ರಕಲಾ ಪರಿಷತ್ನಲ್ಲಿ ಆಯೋಜಿಸಲಾಗಿದೆ.
75 ಕಲಾವಿದರು ಮೂರು ತಿಂಗಳಿನಿಂದ ಶ್ರಮಿಸಿ, ತಮ್ಮ ರಚನೆಗಳನ್ನು ಇಲ್ಲಿ ಪ್ರದರ್ಶಿಸಿದ್ದಾರೆ. ಸೆಪ್ಟೆಂಬರ್ 22ರಂದು ಆರಂಭವಾಗಿರುವ ಈ ಪ್ರದರ್ಶನ ಅಕ್ಟೋಬರ್ 3ರ ವರೆಗೆ ನಡೆಯಲಿದೆ.
ವುಡ್ ಕಟ್ ಪ್ರಿಂಟ್ಸ್ ಅನ್ನುವ ವಿಶೇಷ ಸ್ವರೂಪದ ರಚನೆಯ ಮೂಲಕ ಇಲ್ಲಿ ಚಿತ್ರಗಳನ್ನು 4 ಅಡಿ - 8 ಅಡಿ ಫ್ರೇಮ್ನಲ್ಲಿ ತಯಾರಿಸಲಾಗಿದೆ. ಪ್ರಸಕ್ತ ಸಮಾಜದ ಆಗುಹೋಗುಗಳು, ಇಂದಿನ ಸ್ಥಿತಿಗತಿಗೆ ಸ್ಪಂದನೆಯ ರೀತಿಯಲ್ಲಿ ಮತ್ತು ಜನಸಾಮಾನ್ಯರ ದಿನನಿತ್ಯದ ಕಥೆಯನ್ನು ಇಲ್ಲಿ ಕಲಾವಿದರು ತಮ್ಮ ಕ್ರಿಯಾಶೀಲತೆಯ ಮೂಲಕ ಪ್ರಸ್ತುತಪಡಿಸಿದ್ದಾರೆ.
ಚಿತ್ರ ಪ್ರದರ್ಶನ ಕುರಿತಂತೆ ‘ಪ್ರಜಾವಾಣಿ’ ಜತೆ ಮಾತನಾಡಿದ ಕಲಾವಿದ ಗಣಪತಿ ಅಗ್ನಿಹೋತ್ರಿ, ‘ಮೂರು ತಿಂಗಳ ಪರಿಶ್ರಮದಿಂದ ಇಲ್ಲಿ ಸುಂದರ ರಚನೆಗಳು ‘ವುಡ್ ಕಟ್ ಪ್ರಿಂಟ್ಸ್’ ಎನ್ನುವ ವಿಶಿಷ್ಟವಾದ ಚಿತ್ರಕಲೆಯ ಪ್ರಕಾರದಲ್ಲಿ ಮೂಡಿಬಂದಿದೆ. ಕೋವಿಡ್ ಕಾಲದಲ್ಲಿ ಜನಸಾಮಾನ್ಯರು, ಕಲಾವಿದರು ಸಹಿತ ಸಮಾಜದ ವಿವಿಧ ವರ್ಗ ಎದುರಿಸಿದ ಸಮಸ್ಯೆಗಳು, ದಿನನಿತ್ಯದ ಜೀವನಶೈಲಿಯನ್ನು ಸರಳವಾಗಿ ಪ್ರತಿಬಿಂಬಿಸುವಂತೆ ಪ್ರದರ್ಶಿಸಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.