ಬೆಂಗಳೂರು: ಸತೀಶ ಜಾರಕಿಹೊಳಿ ಅವರು ಹಿಂದೂ ಪದದ ಕುರಿತು ಹೇಳಿಕೆಯನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಾಜ್ಯ ಸಮಿತಿ ಸಂಘಟನೆಗಳ ಸಮನ್ವಯ ಸಮಿತಿ) ಸ್ವಾಗತಿಸಿದೆ. ಅವರ ಹೇಳಿಕೆಯನ್ನು ಬೆಂಬಲಿಸಿ ಬಹಿರಂಗ ಚರ್ಚೆಗೆ ಆಹ್ವಾನ ನೀಡಿದೆ.
‘ಸತೀಶ ಜಾರಕಿಹೊಳಿ ಅವರು ಯಾವುದೇ ಜಾತಿ ಮತ್ತು ಧರ್ಮವನ್ನು ನಿಂಧಿಸಿಲ್ಲ. ಅವರು ನೀಡಿರುವ ಹೇಳಿಕೆಯನ್ನು ಗಮನಿಸಬೇಕು’ ಎಂದು ದಸಂಸ ರಾಜ್ಯ ಸಂಚಾಲಕ ಬಸವರಾಜ್ ಕೌತಾಲ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಸಮರ್ಥಿಸಿಕೊಂಡರು.
‘ಹಿಂದುತ್ವದ ಹೆಸರಿನಲ್ಲಿ ಸಾವಿರಾರೂ ವರ್ಷಗಳಿಂದ ದಲಿತರನ್ನು, ಆದಿವಾಸಿಗಳನ್ನು ಮತ್ತು ಮಹಿಳೆಯರನ್ನು ವಂಚಿಸುತ್ತಲೇ ಬಂದಿದ್ದಾರೆ. ಹಿಂದೂ ಎಂದರೆ ನಾವೆಲ್ಲ ಒಂದು ಎಂದು ಹೇಳಿ ದೊಡ್ಡ ಸಮುದಾಯಗಳನ್ನು ಜಾತಿಯ ಹೆಸರಿನಲ್ಲಿ ಹಲ್ಲೆ, ಕೊಲೆ, ಅತ್ಯಾಚಾರ ಮತ್ತು ಸಾಮಾಜಿಕ ಬಹಿಷ್ಕಾರ ಹಾಕುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆರ್ಪಿಐ ರಾಜ್ಯಾಧ್ಯಕ್ಷ ಆರ್. ಮೋಹನ್ರಾಜ್ ಮಾತನಾಡಿ, ‘ಬಿಜೆಪಿ ತನ್ನ ಇಚ್ಛಾಶಕ್ತಿಯನ್ನು ಪೂರೈಸಿಕೊಳ್ಳಲು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವುದು ಖಂಡನೀಯ. ಸತೀಶ ಜಾರಕಿಹೊಳಿ ಅವರ ಪರವಾಗಿ ಕಾಂಗ್ರೆಸ್ ಪಕ್ಷ ಇರಬೇಕಾಗಿತ್ತು. ರಾಜಕೀಯ ದುರದ್ದೇಶದಿಂದ ಆ ಪಕ್ಷವೂ ಹೇಳಿಕೆಯನ್ನು ಖಂಡಿಸಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.