ಬೆಂಗಳೂರು: ಶಿಕ್ಷಣ ಇಲಾಖೆಯಲ್ಲೂ ಶೇ 40ರಷ್ಟು ಭ್ರಷ್ಟಾಚಾರ ನಡೆಯುತ್ತಿದೆ ಎನ್ನುವನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಸಂಘದ (ರುಪ್ಸಾ) ಆರೋಪಗಳನ್ನು ಕರ್ನಾಟಕ ರಾಜ್ಯ ಶಿಕ್ಷಣಾಧಿಕಾರಿಗಳ ಸಂಘ ಖಂಡಿಸಿದೆ.
ರುಪ್ಸಾ ಪದಾಧಿಕಾರಿಗಳ ಎಲ್ಲ ಆರೋಪಗಳೂ ಸ್ವಾರ್ಥಸಾಧನೆಗಾಗಿ, ಅಧಿಕಾರಿಗಳ ತೇಜೋವಧೆಗಾಗಿ ಮಾಡಲಾಗಿದೆ. ಈ ಕುರಿತು ಕಾನೂನು ತಜ್ಞರ ಜತೆ ಚರ್ಚೆ ನಡೆಸಿ, ಕ್ರಮ ಜರುಗಿಸಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ರಾಜ್ಕುಮಾರ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದರು.
ಆಡಳಿತ ಮಂಡಳಿ ತಮ್ಮದೇ ಲಾಗಿನ್ನಲ್ಲಿ ಅರ್ಜಿ ಸಲ್ಲಿಸುತ್ತಾರೆ. ಕಚೇರಿಗಳಿಗೆ ಅಲೆದಾಡುವ ಪ್ರಮೇಯವೇ ಇಲ್ಲ. ಆನ್ಲೈನ್ನಲ್ಲೇ ದಾಖಲೆಗಳನ್ನು ಅಪ್ಲೋಡ್ ಮಾಡಿದರೆ ಸಾಕು. ಬಿಇಒ, ಡಿಡಿಪಿಐ ಪರಿಶೀಲಿಸಿ, ನವೀಕರಣ ಪತ್ರ ನೀಡುವರು. ಹಾಗಾಗಿ, ಅವ್ಯವಹಾರಕ್ಕೆ ಅವಕಾಶವೇ ಇಲ್ಲ ಎಂದು ಸಮರ್ಥಿಸಿಕೊಂಡರು.
ಕೋರ್ಟ್ ತೀರ್ಪಿನ ಅನ್ವಯ ಕಟ್ಟಡ ಗುಣಮಟ್ಟ, ಅಗ್ನಿಶಾಮಕ ಸುರಕ್ಷತೆಯ ಪ್ರಮಾಣಪತ್ರ ಕಡ್ಡಾಯ. ಇದರಿಂದ ನವೀಕರಣ ಪ್ರಕ್ರಿಯೆ ವಿಳಂಬವಾಗುತ್ತಿದೆ. ಸಮಸ್ಯೆಗಳಿರುವುದು ಖಾಸಗಿ ಶಾಲೆಗಳಲ್ಲಿ, ಅವುಗಳನ್ನು ಸರಿಪಡಿಸಿಕೊಳ್ಳದೇ ಅನಗತ್ಯ ಆರೋಪ ಮಾಡುತ್ತಿದ್ದಾರೆ. ಆರ್ಟಿಇ ಹಣವೂ ಆನ್ಲೈನ್ ಮೂಲಕವೇ ಇತ್ಯರ್ಥವಾಗುತ್ತದೆ. ದಾಖಲೆಗಳು ಸರಿ ಇದ್ದರೆ ಅವರ ಶಾಲೆಯ ಖಾತೆಗೆ ಜಮೆಯಾಗುತ್ತದೆ. ಎನ್ಒಸಿ ನೀಡುವಲ್ಲಿಯೂ ಯಾವುದೇ ಅವ್ಯವಹಾರ ನಡೆಯುತ್ತಿಲ್ಲ. ಹೊಸ ಶಾಲೆಗಳ ಮಾನ್ಯತೆಗೆ ತ್ರಿ ಸದಸ್ಯ ಸಮಿತಿ ನೀಡಿದ ವರದಿಯಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿವರ ನೀಡಿದರು.
ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ. ಶಿಕ್ಷಕರ ವರ್ಗಾವಣೆ ಕಾರ್ಯ ಪಾರದರ್ಶಕವಾಗಿ, ಕೌನ್ಸೆಲಿಂಗ್ ಮೂಲಕ ನಡೆಯುತ್ತಿದೆ. ಭ್ರಷ್ಟ ಅಧಿಕಾರಿಗಳನ್ನು ಸಂಘ ಬೆಂಬಲಿಸುವುದಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಕೆ.ಜಿ.ಅಂಜನಪ್ಪ, ಪದಾಧಿಕಾರಿಗಳಾದ ಪ್ರಶಾಂತ್, ಗೋವಿಂದಪ್ಪ, ಗೋಪಾಲಗೌಡ, ನಸ್ರಿನ್ತಾಜ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.