ಬೆಂಗಳೂರು: 'ಕೆಎಸ್ಬಿಡಿಬಿ ಹಾಗೂ ಜರ್ಮನಿಯ ಹ್ಯಾಂಬರ್ಗ್ ಇನ್ವೆಸ್ಟ್ ನಡುವಿನ ಸಾಂಸ್ಥಿಕ ಪಾಲುಗಾರಿಕೆಯು ಹಸಿರು ಶಕ್ತಿ ಕ್ಷೇತ್ರದ ಬೆಳವಣಿಗೆ, ಜೈವಿಕ ಇಂಧನ ಕ್ಷೇತ್ರದಲ್ಲಿ ನೂತನ ಆವಿಷ್ಕಾರ, ಬಂಡವಾಳ ಹೂಡಿಕೆ ಹಾಗೂ ಸುಸ್ಥಿರ ಇಂಧನ ಅಭಿವೃದ್ಧಿಯಲ್ಲಿ ಕರ್ನಾಟಕ ಮಾದರಿ ಆಗಲಿದೆ’ ಎಂದು ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ (ಕೆಎಸ್ಬಿಡಿಬಿ) ಅಧ್ಯಕ್ಷ ಎಸ್.ಈ.ಸುಧೀಂದ್ರ ತಿಳಿಸಿದರು.
ಹಸಿರು ಶಕ್ತಿ ಮತ್ತು ಸಾಂಸ್ಥಿಕ ಪಾಲುಗಾರಿಕೆ ಸಂಬಂಧ ಸೋಮವಾರ ಬರ್ಜೆಡರ್ಫ್ (ಜರ್ಮನಿ) ಸಂಸತ್ ಸದಸ್ಯ ಪರ್ಮೋದ್ ಕುಮಾರ್ ಅವರು ಮಂಡಳಿ ಅಧ್ಯಕ್ಷ ಎಸ್.ಈ.ಸುಧೀಂದ್ರ ಅವರನ್ನು ಭೇಟಿಯಾಗಿ ಚರ್ಚಿಸಿದರು.
ಈ ವೇಳೆ ಮಾತನಾಡಿದ ಸುಧೀಂದ್ರ, ‘ಹಸಿರು ಶಕ್ತಿ ಕ್ಷೇತ್ರದ ಉನ್ನತೀಕರಣ ಹಾಗೂ ವಾಣಿಜ್ಯೀಕರಣಕ್ಕಾಗಿ ಮಂಡಳಿಯು ಸಾಂಸ್ಥಿಕ ಪಾಲುದಾರಿಕೆಗೆ ಆಸಕ್ತಿ ಹೊಂದಿದೆ. ಇಂಧನ ಕ್ಷೇತ್ರಗಳಲ್ಲಿ ಜ್ಞಾನ, ಸಂಶೋಧನೆ, ಕೈಗಾರಿಕಾ ಸಂಬಂಧಗಳು ಮತ್ತು ಉದ್ದಿಮೆದಾರರ ಪ್ರೋತ್ಸಾಹಕ್ಕೆ ಜಂಟಿಯಾಗಿ ಕಾರ್ಯಾಚರಣೆ ರೂಪಿಸಿ ಅನುಷ್ಠಾನಗೊಳಿಸಲು ದಾರಿಯಾಗಲಿದೆ. ಈ ಕ್ಷೇತ್ರಗಳಲ್ಲಿ ಜರ್ಮನ್ ದೇಶದ ಹೂಡಿಕೆದಾರರು ಬಂಡವಾಳ ತೊಡಗಿಸಲು ಪೂರಕ ವಾತಾವರಣ ಸೃಷ್ಟಿಯಾಗಲಿದೆ. ಜಂಟಿ ಸಹಭಾಗಿತ್ವದಲ್ಲಿ ಕಾರ್ಯಯೋಜನೆ ರೂಪಿಸಲು ಅಗತ್ಯ ನೀತಿ ರಚನೆ, ತರಬೇತಿ ಕಾರ್ಯಕ್ರಮಗಳ ಆಯೋಜನೆ, ಪ್ರಾಯೋಗಿಕ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಚಾಲನೆ ಸಿಗಲಿದೆ’ ಎಂದು ಅಭಿಪ್ರಾಯಪಟ್ಟರು.
ಚರ್ಚೆಯಲ್ಲಿ ಹ್ಯಾಂಬರ್ಗ್ ಇನ್ವೆಸ್ಟ್ ಯೋಜನಾ ನಿರ್ದೇಶಕ ಲೀ ಲೀ ಓಎನ್ಜಿ, ಹ್ಯಾಂಬರ್ಗ್ ಇನ್ವೆಸ್ಟ್ನ ಸಮಿಹಾ ಪ್ರದೀಪ್ ಸುಲೆ, ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಎಲ್. ಶಿವಶಂಕರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಲೋಹಿತ್ ಬಿ.ಆರ್., ಯೋಜನಾ ಸಲಹೆಗಾರ ಜಿ.ಎನ್. ದಯಾನಂದ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.