ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರನ್ನು ಸುವರ್ಣ ವಿಧಾನಸೌಧದಲ್ಲೇ ಆಕ್ಷೇಪಾರ್ಹ ಪದಗಳಿಂದ ನಿಂದಿಸಿದ ಆರೋಪದ ಮೇಲೆ ಬೆಳಗಾವಿಯ ಹಿರೇಬಾಗೇವಾಡಿ ಪೊಲೀಸರು ಬಂಧಿಸಿದ್ದ ವಿಧಾನ ಪರಿಷತ್ನ ಬಿಜೆಪಿ ಸದಸ್ಯ ಸಿ.ಟಿ.ರವಿ ಅವರನ್ನು ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆತರುತ್ತಿದ್ದಾಗ ಹೈಕೋರ್ಟ್ ಆದೇಶದಂತೆ ಶಿಗ್ಗಾವಿಯಲ್ಲಿ ಮಾರ್ಗಮಧ್ಯೆಯೇ ಬಿಡುಗಡೆ ಮಾಡಲಾಯಿತು.
ಈ ಪ್ರಕರಣ ಆಡಳಿತರೂಢ ಕಾಂಗ್ರೆಸ್ ಮತ್ತು ಪ್ರಮುಖ ವಿರೋಧ ಪಕ್ಷ ಬಿಜೆಪಿ ಮಧ್ಯೆ ಎರಡು ದಿನ ವಾಕ್ಸಮರ, ಸಂಘರ್ಷಕ್ಕೆ ಕಾರಣವಾಯಿತು. ಕಾಂಗ್ರೆಸ್ ನಾಯಕರು ಸಚಿವೆ ಲಕ್ಷ್ಮೀ ಅವರ ನಿಲುವನ್ನು ಪ್ರಬಲವಾಗಿ ಸಮರ್ಥಿಸಿ ಕೊಂಡರೆ, ಬಿಜೆಪಿ ನಾಯಕರು ರವಿ ಅವರ ಬೆಂಬಲಕ್ಕೆ ನಿಂತಿದ್ದರು.
ರವಿ ಅವರನ್ನು ಗುರುವಾರ ಸಂಜೆ ವಶಕ್ಕೆ ಪಡೆದಿದ್ದ ಹಿರೇಬಾಗೇವಾಡಿ ಠಾಣೆ ಪೊಲೀಸರು, ರಾತ್ರಿ ವೇಳೆಗೆ ಬಂಧಿಸಿದ್ದರು. ಇಡೀ ರಾತ್ರಿ ನಾಟಕೀಯ ಬೆಳವಣಿಗೆಗಳು ನಡೆದವು. ಹಿರೇ ಬಾಗೇವಾಡಿಯಿಂದ ರವಿ ಅವರನ್ನು ಖಾನಾಪುರ ಪೊಲೀಸ್ ಠಾಣೆಗೆ ಸ್ಥಳಾಂತರಿಸಲಾಯಿತು. ಬಳಿಕ ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳ ಹಲವು ಕಡೆಗಳಿಗೆ ಕರೆದೊಯ್ಯಲಾಯಿತು.
ನಸುಕಿನ ಜಾವ 3.30ರ ವೇಳೆಗೆ ರಾಮದುರ್ಗ ಸರ್ಕಾರಿ ಆಸ್ಪತ್ರೆಯಲ್ಲಿ ತಲೆಯಲ್ಲಿನ ಗಾಯಕ್ಕೆ ಚಿಕಿತ್ಸೆ ಕೊಡಿಸ ಲಾಯಿತು. ಅಲ್ಲಿಂದ ಮುತಗಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಆರೋಗ್ಯ ತಪಾಸಣೆ ನಡೆಸಲಾಯಿತು.
ಶುಕ್ರವಾರ ಬೆಳಿಗ್ಗೆ ಬೆಳಗಾವಿಯ ಐದನೇ ಜೆಎಂಎಫ್ ನ್ಯಾಯಾಲಯಕ್ಕೆ ರವಿ ಅವರನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಹಾಜರುಪಡಿಸಲಾಯಿತು.
ಆಗಲೇ ಅವರನ್ನು ಬಿಡುಗಡೆ ಮಾಡುವಂತೆ ಅವರ ಪರ ವಕೀಲರು ಜಾಮೀನು ಅರ್ಜಿಯನ್ನೂ ಸಲ್ಲಿಸಿದರು. ಪ್ರಾಸಿಕ್ಯೂಷನ್ ಪರ ಹೆಚ್ಚುವರಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಕೂಡ ವಾದ ಮಂಡಿಸಿದ್ದರು.
ಪ್ರಕರಣವನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಿ ಮಧ್ಯಾಹ್ನ ಆದೇಶ ಹೊರಡಿಸಿದ ಬೆಳಗಾವಿ ನ್ಯಾಯಾಲಯ, ಆರೋಪಿಯನ್ನು ಬೆಂಗಳೂರಿಗೆ ಕರೆತರಲು ಟ್ರಾನ್ಸಿಟ್ ವಾರಂಟ್ ಅನ್ನೂ ಮಂಜೂರು ಮಾಡಿತ್ತು. ಅದರ ಅನುಸಾರ ರಸ್ತೆ ಮಾರ್ಗವಾಗಿ ರವಿ ಅವರನ್ನು ಬೆಂಗಳೂರಿನತ್ತ ಕರೆತರಲಾಗುತ್ತಿತ್ತು.
ಪ್ರಕರಣ ವರ್ಗಾವಣೆಯ ಆದೇಶ ಹೊರ ಬೀಳುತ್ತಿದ್ದಂತೆಯೇ ರವಿ ಪರ ವಕೀಲರು ಜನಪ್ರತಿನಿಧಿಗಳ ವಿಶೇಷ
ನ್ಯಾಯಾಲಯದಲ್ಲಿ ಮಧ್ಯಂತರ ಜಾಮೀನು ಕೋರಿ ಒಂದು ಅರ್ಜಿ ಸಲ್ಲಿಸಿದರೆ, ಪ್ರಕರಣಕ್ಕೆ ತಡೆ ಕೋರಿ ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ಮತ್ತೊಂದು ಅರ್ಜಿ ಸಲ್ಲಿಸಿದ್ದರು. ಮಾರ್ಗ ಮಧ್ಯೆ ಯಾವ ಸ್ಥಳದಲ್ಲಿದ್ದಾರೋ ಅಲ್ಲಿಂದಲೇ ರವಿ ಅವರನ್ನು ಬಿಡುಗಡೆ ಮಾಡುವಂತೆ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಹೊರಡಿಸಿತು.
ತಕ್ಷಣವೇ ಆದೇಶದ ಪ್ರತಿ ಪಡೆದ ವಕೀಲರು, ಶಿಗ್ಗಾವಿಯಲ್ಲಿ ಬರುತ್ತಿದ್ದ ಪೊಲೀಸರಿಗೆ ತಲುಪಿಸಿದರು. ಅಲ್ಲಿಯೇ ಅವರನ್ನು ಬಂಧನದಿಂದ ಬಿಡುಗಡೆ ಮಾಡಲಾಯಿತು.
ಸತ್ಯಕ್ಕೆ ಜಯ ದೊರೆತಿದೆ. ಕಾಂಗ್ರೆಸ್ ಸರ್ಕಾರ ಪೊಲೀಸ್ ಬಲ ಉಪಯೋಗಿಸಿಕೊಂಡು ಮಾನಸಿಕವಾಗಿ ಕುಗ್ಗಿಸಲು ಮುಂದಾದರೂ ನಾನು ಎಳ್ಳಷ್ಟೂ ಕುಗ್ಗುವುದಿಲ್ಲ.–ಸಿ.ಟಿ.ರವಿ, ವಿಧಾನ ಪರಿಷತ್ ಸದಸ್ಯ
ಸಿ.ಟಿ ರವಿ ಅವರು ಚಿಂತಕರ ಚಾವಡಿಯಲ್ಲಿ ‘ಆ’ ಮಾತು ಬಳಸಿದ್ದು ನಿಜ. ನಾನು ಇಡೀ ರಾಜ್ಯದ ಮಹಿಳೆಯರ ಪ್ರತಿನಿಧಿ. ನಾನೇಕೆ ಸುಳ್ಳು ಹೇಳಲಿ.–ಲಕ್ಷ್ಮೀ ಹೆಬ್ಬಾಳಕರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ
ಹಲವೆಡೆ ಪ್ರತಿಭಟನೆ
ಸಿ.ಟಿ. ರವಿ ಬಂಧನ ವಿರೋಧಿಸಿ ಅವರ ಸ್ವಂತ ಊರು ಚಿಕ್ಕಮಗಳೂರಿನಲ್ಲಿ ಶುಕ್ರವಾರ ಬಂದ್ ನಡೆಸಲಾಯಿತು. ಬಂದ್ಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಬೆಂಗಳೂರು, ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆಗಳನ್ನು ನಡೆಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.