ADVERTISEMENT

ಮಾ.6ಕ್ಕೆ ಕರ್ನಾಟಕ ಹಾಲು ಮಹಾಮಂಡಳದ ಅಧ್ಯಕ್ಷರ ಚುನಾವಣೆ

ಕರ್ನಾಟಕ ರಾಜ್ಯ ಸಹಕಾರ ಚುನಾವಣಾ ಆಯೋಗಕ್ಕೆ ಮಹಾಮಂಡಳ ಪ್ರಸ್ತಾವನೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 0:13 IST
Last Updated 11 ಫೆಬ್ರುವರಿ 2026, 0:13 IST
ಕರ್ನಾಟಕ ಹಾಲು ಮಹಾಮಂಡಳ
ಕರ್ನಾಟಕ ಹಾಲು ಮಹಾಮಂಡಳ   

ಬೆಂಗಳೂರು: 20 ತಿಂಗಳ ಹಿಂದೆಯೇ ಅಧಿಕಾರ ಅವಧಿ ಮುಗಿದಿದ್ದರೂ ಕಾನೂನು ತೊಡಕುಗಳ ಕಾರಣದಿಂದ ಮುಂದೆ ಹೋಗುತ್ತಲೇ ಇದ್ದ ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್‌) ಅಧ್ಯಕ್ಷರ ಚುನಾವಣೆ ಮಾ.6ರಂದು ನಡೆಯುವ ಸಾಧ್ಯತೆ ಇದೆ.

ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಚುನಾವಣೆಯು ಮುಗಿದಿರುವುದರಿಂದ ಮತದಾನದ ದಿನಾಂಕ ಅಂತಿಮಗೊಳಿಸುವಂತೆ ಕರ್ನಾಟಕ ರಾಜ್ಯ ಸಹಕಾರ ಚುನಾವಣಾ ಆಯೋಗಕ್ಕೆ ಪ್ರಸ್ತಾವವನ್ನು ಸಲ್ಲಿಸಲಾಗಿದೆ. ಬಹುತೇಕ ಅದೇ ದಿನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಬಹುದು.

‘ಸಹಕಾರ ಚುನಾವಣಾ ಆಯೋಗದ ಆಯುಕ್ತರಾಗಿರುವ ಎಂ.ನಾಗಲಾಂಬಿಕಾದೇವಿ ಅವರು ಮುಂದಿನ ವಾರದೊಳಗೆ ಚುನಾವಣೆ ದಿನಾಂಕವನ್ನು ಅಂತಿಮಗೊಳಿಸುವ ನಿರೀಕ್ಷೆಯಿದ್ದು, ಆನಂತರ ಪ್ರಕ್ರಿಯೆಗಳು ಶುರುವಾಗಲಿವೆ’ ಎಂದು ಒಕ್ಕೂಟದ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.‌‌

ADVERTISEMENT

ಕೆಎಂಎಫ್‌ನ ಹಿಂದಿನ ಆಡಳಿತ ಮಂಡಳಿಯ ಅವಧಿ 2024ರ ಜುಲೈ 7ಕ್ಕೆ ಮುಕ್ತಾಯಗೊಂಡಿತ್ತು. ಆಗ, ಲೋಕಸಭಾ ಚುನಾವಣೆ ಎದುರಾಗಿದ್ದರಿಂದಾಗಿ, ‌ಆಡಳಿತಾಧಿಕಾರಿ ನೇಮಕ ಮಾಡದೆ ಹಾಲಿ ಆಡಳಿತ ಮಂಡಳಿಯನ್ನೇ ಮುಂದುವರಿಸಲಾಗಿತ್ತು.

ಆಡಳಿತ ಮಂಡಳಿಯ ಅಧಿಕಾರಾವಧಿ ಮುಗಿದ ನಂತರ, ಸಹಕಾರ ಸಂಘಗಳ ನಿಬಂಧಕ ಟಿ.ಎಚ್.ಎಂ. ಕುಮಾರ್ ಅವರನ್ನು ಆರು ತಿಂಗಳ ಅವಧಿಗೆ ಆನಂತರ 2025ರ ಜೂನ್‌ 4ರಂದು ಆಡಳಿತಾಧಿಕಾರಿಯಾಗಿ ನೇಮಿಸಲಾಗಿತ್ತು. ಆಗಲೂ ಚುನಾವಣೆ ಪ್ರಕ್ರಿಯೆ ಮುಂದುವರೆದಿದ್ದರಿಂದ ಇನ್ನಷ್ಟು ಅವಧಿಗೆ ವಿಸ್ತರಣೆ ಮಾಡಲಾಗಿತ್ತು.

ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಕರ್ನಾಟಕದಲ್ಲಿರುವ 16 ಹಾಲು ಒಕ್ಕೂಟಗಳ ಚುನಾವಣೆ ನಂತರ ಪ್ರತಿನಿಧಿ ಆಯ್ಕೆ ಪ್ರಕ್ರಿಯೆಯನ್ನೂ ಹಿಂದಿನ ವರ್ಷವೇ ನಡೆಸಲಾಗಿತ್ತು. ಆದರೆ, ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನೇಮಕ ವಿವಾದ ನ್ಯಾಯಾಲಯ ಮೆಟ್ಟಿಲು ಏರಿದ್ದರಿಂದ ಇಡೀ ಪ್ರಕ್ರಿಯೆ ಮುಂದಕ್ಕೆ ಹೋಗುತ್ತಲೇ ಇತ್ತು. ‌

ಬೇಗನೇ ಚುನಾವಣೆ ಮುಗಿಸುವಂತೆ ನ್ಯಾಯಾಲಯ ಸೂಚನೆ ನೀಡಿದ ನಂತರ ಈ ತಿಂಗಳ ಮೊದಲ ವಾರದಲ್ಲಿ ಪ್ರಕ್ರಿಯೆ ಮುಗಿದು ಫಲಿತಾಂಶ ಘೋಷಣೆಯೂ ಆಗಿದೆ. ಫೆ.16ರಂದು ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆ ನಡೆಯಲಿದೆ. ಜತೆಗೆ ಮಹಾಮಂಡಳ ನಿರ್ದೇಶಕರ ಆಯ್ಕೆಯೂ ಆಗಲಿದೆ. ಈ ಪ್ರಕ್ರಿಯೆ ಪೂರ್ಣಗೊಂಡರೆ ಮಹಾಮಂಡಳ ಅಧ್ಯಕ್ಷರ ಚುನಾವಣೆ ಸುಲಭವಾಗಲಿದೆ.

ಮಹಾಮಂಡಳದ ಅಧ್ಯಕ್ಷರ ಚುನಾವಣೆಯಲ್ಲಿ 20 ಮಂದಿ ಮತ ಹಾಕಲಿದ್ದಾರೆ. 16 ಹಾಲು ಒಕ್ಕೂಟಗಳ ನಾಮ ನಿರ್ದೇಶಿತ ಸದಸ್ಯರು, ಸರ್ಕಾರದಿಂದ ನಾಮನಿರ್ದೇಶನಗೊಂಡ ಒಬ್ಬರು, ಸಹಕಾರ ಸಂಘಗಳ ನಿಬಂಧಕರ ಪ್ರತಿನಿಧಿ, ಪಶುಪಾಲನಾ ಇಲಾಖೆ ಪ್ರತಿನಿಧಿ ಹಾಗೂ ಎನ್‌ಡಿಡಿಬಿ ಪ್ರತಿನಿಧಿ ಮತದಾನ ಮಾಡಲು ಅರ್ಹರು. ಯಲಬುರ್ಗದ ಹಂಪಯ್ಯ ಸ್ವಾಮಿ ಅವರನ್ನು ಸರ್ಕಾರದ ಪ್ರತಿನಿಧಿಯಾಗಿ ನೇಮಿಸಲಾಗಿದೆ.

ಮೂವರ ನಡುವೆ ಸ್ಪರ್ಧೆ

ಹಾಲು ಮಹಾಮಂಡಳದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ಮೂವರ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿದೆ. ಬೆಂಗಳೂರು ಹಾಲು ಒಕ್ಕೂಟದ (ಬಮೂಲ್‌) ಅಧ್ಯಕ್ಷ ಡಿ.ಕೆ.ಸುರೇಶ್‌ ಬಳ್ಳಾರಿ ಕೊಪ್ಪಳ– ರಾಯಚೂರು ಒಕ್ಕೂಟದ ಅಧ್ಯಕ್ಷ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಕೋಲಾರ ಹಾಲು ಒಕ್ಕೂಟ ಅಧ್ಯಕ್ಷ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಅವರು ಪ್ರಮುಖ ಆಕಾಂಕ್ಷಿಗಳು. ಹಿಂದಿನ ಅವಧಿಯಲ್ಲಿ ನಿಮ್ಮ ಬೆಂಬಲಿಗರಿಗೆ ಅವಕಾಶ ಮಾಡಿಕೊಟ್ಟಿದ್ದರಿಂದ ಈ ಅವಧಿಗೆ ನಮ್ಮ ಕಡೆಯವರಿಗೆ ಅಧ್ಯಕ್ಷ ಸ್ಥಾನ ಬಿಟ್ಟು ಕೊಡಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಸೋತಿರುವ ಸಹೋದರ ಡಿ.ಕೆ.ಸುರೇಶ್‌ ಅವರಿಗೆ ಕೆಎಂಎಫ್‌ ಚುಕ್ಕಾಣಿ ಕೊಡಿಸುವ ಇರಾದೆ ಶಿವಕುಮಾರ್‌ ಅವರದ್ದಾಗಿದೆ. ಸಿದ್ದರಾಮಯ್ಯ ಅವರು ತಮ್ಮ ಆಪ್ತ ರಾಘವೇಂದ್ರ ಹಿಟ್ನಾಳ ಪರ ಗಟ್ಟಿಯಾಗಿ ನಿಂತಿದ್ದಾರೆ. ಸೋಮವಾರ ಹಿಟ್ನಾಳ ಅವರು ಮುಖ್ಯಮಂತ್ರಿ ಅವರನ್ನು ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಹಿಂದಿನ ಅವಧಿಯಲ್ಲಿ ಅವಕಾಶ ತಪ್ಪಿದ್ದರಿಂದ ನನಗೂ ಒಂದು ಅವಕಾಶ ಮಾಡಿಕೊಡಿ ಎಂದು ನಂಜೇಗೌಡ ಅವರು ಬೇಡಿಕೆ ಇಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.