ADVERTISEMENT

ಸಮಿತಿ ರಚನೆಯಲ್ಲಿ ನಿಯಮ ಉಲ್ಲಂಘನೆ

ರಾಜ್ಯ ವಿಶ್ರಾಂತ ಕುಲಪತಿಗಳ ವೇದಿಕೆ ಆರೋಪ

​ಪ್ರಜಾವಾಣಿ ವಾರ್ತೆ
Published 22 ಜೂನ್ 2019, 19:46 IST
Last Updated 22 ಜೂನ್ 2019, 19:46 IST

ಬೆಂಗಳೂರು: ವಿಶ್ವವಿದ್ಯಾಲಯಗಳ ಕುಲಪತಿಗಳ ಆಯ್ಕೆಗಾಗಿ ನೇಮಕ ಮಾಡುವ ಶೋಧನಾ ಸಮಿತಿ ರಚನೆ
ಯಲ್ಲಿ ನಿಯಮ ಉಲ್ಲಂಘನೆ ಆಗುತ್ತಿದೆ ಎಂದು ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ವಿಶ್ರಾಂತ ಕುಲಪತಿಗಳ ವೇದಿಕೆ ಆರೋಪಿಸಿದೆ.

‌‘ವಿಶ್ವವಿದ್ಯಾಲಯಗಳ ಕಾರ್ಯಗಳಲ್ಲಿ ರಾಜ್ಯ ಸರ್ಕಾರಹಸ್ತಕ್ಷೇಪ ನಡೆಸುತ್ತಿದೆ. ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಕಾಯ್ದೆ-2000ರ ನಿಯಮಗಳ ಪ್ರಕಾರ ಶೋಧನಾ ಸಮಿತಿಯಲ್ಲಿ ಹಾಲಿ ಕುಲಪತಿಗಳು ಇರಬಾರದು ಎಂಬ ನಿಯಮ ಇದೆ. ಆದರೆ ಇದನ್ನು ಉಲ್ಲಂಘಿಸಿ ಹಾಲಿ ಕುಲಪತಿಗಳ ನೇತೃತ್ವದಲ್ಲೇ ಸಮಿತಿಗಳನ್ನು ರಚಿಸಲಾಗಿದೆ.ಕೆಲವು ಸಮಿತಿಗಳ ಮುಖ್ಯಸ್ಥರನ್ನಾಗಿ ಅನುನುಭವಿ ಪ್ರಾಧ್ಯಾಪಕರು ಹಾಗೂ ಅಧ್ಯಾಪಕರನ್ನು ನೇಮಿಸಿ, ವಿಶ್ರಾಂತ ಕುಲಪತಿಗಳನ್ನು ನಿರ್ಲಕ್ಷಿಸಲಾಗಿದೆ’ ಎಂದು ವೇದಿಕೆಯ ಅಧ್ಯಕ್ಷ ಡಾ.ಎಸ್‌.ಎನ್‌.ಹೆಗ್ಡೆ ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕೂಡಲೇ ಇಂತ ನಿಯಮ ಬಾಹಿರ ಕ್ರಮಗಳನ್ನುಸರಿಪಡಿಸಬೇಕು. ತಪ್ಪಿದರೆ, ನ್ಯಾಯಾಲಯದ ಮೆಟ್ಟಿಲು ಏರುವುದು ಅನಿವಾರ್ಯವಾಗಲಿದೆ’ ಎಂದು ಅವರು ಎಚ್ಚರಿಸಿದರು.

ADVERTISEMENT

‘ರಾಜ್ಯಪಾಲರನ್ನು ಭೇಟಿ ಮಾಡಿ ಚರ್ಚಿಸಲು ಮುಂದಾದರೆ, ರಾಜ್ಯಪಾಲರು ನಮ್ಮ ಭೇಟಿಗೆ ಅವಕಾಶ ನೀಡ
ಲಿಲ್ಲ. ಹಲವು ಬಾರಿ ಮನವಿ ಮಾಡಿದರೂ ಸರ್ಕಾರಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆರಾಜ್ಯಪಾಲರು ಹಾಗೂ ರಾಜ್ಯ ಸರ್ಕಾರಕ್ಕೆಸ್ಪಷ್ಟ ನಿರ್ದೇಶನ ನೀಡುವಂತೆ ರಾಷ್ಟ್ರಪತಿ, ಪ್ರಧಾನಮಂತ್ರಿ ಕಚೇರಿ ಮತ್ತು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಪತ್ರ ಬರೆಯಲಾಗಿದೆ’ ಎಂದರು.

‘ರಾಜ್ಯದಲ್ಲಿರುವ ಎಲ್ಲಾ ವಿಶ್ವವಿದ್ಯಾಲಯಗಳು ಸ್ವಾಯತ್ತ ವಿಶ್ವವಿದ್ಯಾಲಯಗಳಾಗಿದ್ದು, ಆಡಳಿತ, ಅಭಿವೃದ್ಧಿ, ಶಿಕ್ಷಣ, ಪರೀಕ್ಷೆ, ನೇಮಕಾತಿ ಸೇರಿದಂತೆ ಎಲ್ಲಾ ವಿಷಯಗಳ ಬಗ್ಗೆ ಸ್ವತಂತ್ರ್ಯ ನಿರ್ಣಯಗಳನ್ನು ಕೈಗೊಳ್ಳಬಹುದು. ಆದರೆ, ಇತ್ತೀಚಿನ ವರ್ಷಗಳಲ್ಲಿ ವಿಶ್ವವಿದ್ಯಾಲಯಗಳ ಆಂತರಿಕ ವಿಷಯಗಳಲ್ಲಿ ಸರ್ಕಾರತಲೆ ತೂರಿಸುತ್ತಿದೆ. ಹಲವು ಆದೇಶಗಳನ್ನು ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹೊರಡಿಸುತ್ತಿದ್ದಾರೆ, ಕುಲಪತಿಗಳ ಬಾಯಿಗೂ ಬೀಗ ಹಾಕುವ ಕಾರ್ಯ ನಡೆದಿದೆ’ ಎಂದರು.

‘ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಸಾವಿರಾರರು ಬೋಧಕರ ಹುದ್ದೆಗಳು ಖಾಲಿಯಿದ್ದು, ಅತಿಥಿ ಉಪನ್ಯಾಸಕರನ್ನು ಅವಲಂಬಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಉನ್ನತ ಶಿಕ್ಷಣದ ಮೇಲೆ ಭಾರಿ ಪರಿಣಾಮ ಬೀರಿದೆ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ವಿಶ್ರಾಂತ ಕುಲಪತಿಗಳಾದ ಪ್ರೊ.ಪಿ.ವೆಂಕಟರಾಮಯ್ಯ, ಡಾ.ಎನ್.ಪ್ರಭುದೇವ, ಡಾ.ಆರ್.ಎನ್.ಶ್ರೀನಿವಾಸಗೌಡ, ಡಾ.ಆರ್.ಚಂದ್ರಶೇಖರ, ಪ್ರೊ.ಮುನಿಯಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.