ADVERTISEMENT

‘ವರ್ಷ‍ಪೂರ್ತಿ ಕನ್ನಡ ಕಾರ್ಯಕ್ರಮ’

​ಪ್ರಜಾವಾಣಿ ವಾರ್ತೆ
Published 3 ಜನವರಿ 2021, 18:25 IST
Last Updated 3 ಜನವರಿ 2021, 18:25 IST

ಯಲಹಂಕ: ‘ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತು ಕಲೆಯನ್ನು ಅಭಿವೃದ್ಧಿಗೊಳಿಸುವ ಉದ್ದೇಶದಿಂದ ವರ್ಷಪೂರ್ತಿ ಕನ್ನಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದು ಕ.ಸಾ.ಪ ಯಲಹಂಕ ಘಟಕದ ಅಧ್ಯಕ್ಷ ಡಾ.ಎಸ್.ಎಲ್.ಎನ್.ಸ್ವಾಮಿ ತಿಳಿಸಿದರು.

ಈಗಾಗಲೇ ಪ್ರತಿ ಶನಿವಾರ ‘ಮನೆಯಂಗಳದಲ್ಲಿ ಮಂಥನ-ಸಂಧ್ಯಾರಾಗ’ ಕಾರ್ಯಕ್ರಮ ಆರಂಭಿಸಲಾಗಿದ್ದು, ಅದನ್ನು ಆಸಕ್ತಿವುಳ್ಳವರ ಮನೆಗಳಲ್ಲಿ ಮುನ್ನಡೆಸಲು ತೀರ್ಮಾನಿಸಲಾಗಿದೆ. ‘ಪದ್ಮಾವತಿ ಪರಿಣಯ ಕಥಾ’ ವ್ಯಾಖ್ಯಾನವನ್ನು ಪರಿಚಯಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಪ್ರತಿ ತಿಂಗಳ ಕೊನೆಯ ಭಾನುವಾರ ‘ತಿಂಗಳ ಹರಟೆ, ಮಾರ್ಚ್‌ 7 ಮತ್ತು 8ರಂದು ಅಂಬೇಡ್ಕರ್ ಭವನದಲ್ಲಿ ‘ವಿಶೇಷ ಮಹಿಳಾ ಮೇಳ’ ಹಾಗೂ ‘ಕೆಂಡದ ಕುಸುಮಗಳು’, ‘ನನ್ನೊಳಗಿನ ನಾನು’ ‘ಜನಕ ಜಾತೆ ಜಾನಕಿ’ ಮತ್ತಿತರ ನಾಟಕಗಳ ಪ್ರದರ್ಶನ ಆಯೋಜಿಸಲಾಗುವುದು ಎಂದು ತಿಳಿಸಿದರು.

ADVERTISEMENT

ಯಲಹಂಕ ಕರಗ ಮಹೋತ್ಸವದ ಸಂದರ್ಭದಲ್ಲಿ ‘ಅಖಿಲ ಕರ್ನಾಟಕ ನೃತ್ಯೋತ್ಸವ’ ಹಾಗೂ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ‘ಬಾಲಗೋಪಾಲ’ ಸ್ಪರ್ಧೆ ಆಯೋಜಿಸಲಾಗವುದು. ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ ಪ್ರಸಿದ್ಧ ಕವಿಗಳ ನುಡಿವಾಣಿಗಳನ್ನು ಬರೆಸಲಾಗುವುದು, ಎಲ್ಲ ಅಂಗಡಿ ಮುಂಗಟ್ಟುಗಳು ಕನ್ನಡದ ನಾಮಫಲಕವನ್ನು ಕಡ್ಡಾಯವಾಗಿ ಅಳವಡಿಸುವುದರ ಜೊತೆಗೆ ತಪ್ಪಾಗಿ ಕನ್ನಡ ಬಳಸಿರುವ ಫಲಕಗಳನ್ನು ಸರಿಪಡಿಸಬೇಕೆನ್ನುವ ಅಭಿಯಾನ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

ಬ್ಯಾಂಕುಗಳು, ಮಾಲ್‌ಗಳು ಹಾಗೂ ಮಳಿಗೆಗಳಿಗೆ ಭೇಟಿನೀಡಿ, ಗ್ರಾಹಕರು ಬಳಸುವ ನಿತ್ಯ ಆಂಗ್ಲಪದಗಳಿಗೆ ಪರ್ಯಾಯ ಕನ್ನಡ ಪದಗಳನ್ನು ತಿಳಿಸಿ ಹೇಳುವ ಪದಗೋಷ್ಠಿಗಳನ್ನು ಎಲ್ಲೆಡೆ ನಡೆಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.