ಬೆಂಗಳೂರು: ‘ಯಾವುದೇ ಉದ್ಯಮದ ಜೊತೆಗೆ ಸರ್ಕಾರ, ಬ್ಯಾಂಕ್ ಕೂಡ ಪಾಲುದಾರರಂತಿರುತ್ತವೆ. ಆದರೆ, ಈ ಅಂಶಗಳೇ ಉದ್ಯಮಗಳನ್ನು ನಿರ್ದೇಶಿಸುವ ಬದಲು, ಉದ್ಯಮಗಳು ತಮ್ಮದೇ ಆದ ನಿಯಮಗಳನ್ನು ರೂಪಿಸಿಕೊಳ್ಳಬೇಕು, ಪ್ರಗತಿಯನ್ನು ಖಚಿತಪಡಿಸಿಕೊಳ್ಳಬೇಕು’ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಭಾಸ್ಕರ್ ರಾವ್ ಸಲಹೆ ನೀಡಿದರು.
ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ (ಕಾಸಿಯಾ) ವತಿಯಿಂದ ಬುಧವಾರ ಪೊಲೀಸ್ ಸಿಬ್ಬಂದಿಗೆ ₹10 ಲಕ್ಷ ಮೌಲ್ಯದ ಸ್ಯಾನಿಟೈಸರ್ ಮತ್ತು ಮಾಸ್ಕ್ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸಣ್ಣ ಉದ್ಯಮಗಳೆಂದರೆ ಕುದುರೆ ಸವಾರನಿದ್ದಂತೆ. ನೀವು ಕುದುರೆಯನ್ನು ನಿಯಂತ್ರಿಸಬೇಕೇ ವಿನಾ, ನಿಮ್ಮನ್ನು ನಿಯಂತ್ರಿಸಲು ಕುದುರೆಗೆ ಅವಕಾಶ ನೀಡಬಾರದು’ ಎಂದರು.
‘ಸುಮಾರು 25 ವರ್ಷಗಳ ಹಿಂದೆ ಸಣ್ಣ ಕೈಗಾರಿಕೆಗಳು ಎದುರಿಸುತ್ತಿದ್ದ ಸಮಸ್ಯೆಗಳು, ಈಗ ಎದುರಿಸುತ್ತಿರುವ ಸಮಸ್ಯೆಗಳು ಒಂದೇ ಆಗಿವೆ. ಆದರೆ, ಈಗ ಈ ಸಮಸ್ಯೆಗಳು ಎದ್ದು ಕಾಣುತ್ತಿವೆ. ಇದರಿಂದ ಹೊರಬರಲುಸಣ್ಣ ಕೈಗಾರಿಕೆಗಳು ತಮ್ಮ ಬೌದ್ಧಿಕ ಆಸ್ತಿಯನ್ನು ಹೆಚ್ಚಿಸುವ ಮತ್ತು ಸೃಷ್ಟಿಸುವ ಅಗತ್ಯವಿದೆ’ ಎಂದರು.
ಕಾಸಿಯಾ ಅಧ್ಯಕ್ಷ ಕೆ.ಬಿ. ಅರಸಪ್ಪ, ‘ಲಾಕ್ಡೌನ್ ಸಂದರ್ಭದಲ್ಲಿ ಸಣ್ಣ ಕೈಗಾರಿಕೆಗಳಿಗೆ ಪೊಲೀಸರು ಬೆಂಬಲ ನೀಡಿದರು. ಇದರಿಂದ ಲಾಕ್ಡೌನ್ ನಂತರ, ಉದ್ಯಮದ ಕಾರ್ಯಾಚರಣೆಗಳನ್ನು ಪುನರಾರಂಭಿಸಲು ತುಂಬಾ ಸಹಾಯವಾಯಿತು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.