ಬೆಂಗಳೂರು: ‘ಹಾಸ್ಯ ಪ್ರವೃತ್ತಿಯವರಾಗಿದ್ದ ಕವಿ ಸಿದ್ದಲಿಂಗಯ್ಯ, ಸಮಯ ಪ್ರಜ್ಞೆ ಹೊಂದಿದ್ದರು. ಇನ್ನೊಬ್ಬರಿಗೆ ನೋವಾಗದಂತೆ ನಗಿಸುತ್ತಲ್ಲೇ ವ್ಯವಸ್ಥೆ ಯಲ್ಲಿನ ಲೋಪವನ್ನು ಹೊರಗೆಳೆಯು ತ್ತಿದ್ದರು’ ಎಂದು ಲೇಖಕ ಶೂದ್ರ ಶ್ರೀನಿವಾಸ್ ಅಭಿಪ್ರಾಯಪಟ್ಟರು.
ಸಾಧನಕೇರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ
ಡಾ.ಸಿದ್ದಲಿಂಗಯ್ಯ ಅವರ ಸಂಸ್ಮರಣೆ ಕಾರ್ಯಕ್ರಮದಲ್ಲಿ ವತ್ಸಲಾ ಸುರೇಶ್ ಅವರು ಸಂಪಾದಿಸಿದ ‘ಕವಿ ನೆನಪು’ ಕೃತಿ ಬಿಡುಗಡೆ ಮಾಡಿ, ಮಾತನಾಡಿದರು.
‘ಸಿದ್ದಲಿಂಗಯ್ಯ ಅವರು ‘ಹೊಲೆಮಾದಿಗರ ಹಾಡು’ ಕವನ ಸಂಕಲನವನ್ನು ಹೊರತಂದ ಬಳಿಕ ಕರ್ನಾಟಕದಾದ್ಯಂತ ಜನಮನ್ನಣೆ ಪಡೆ ದರು. ಅವರ ಕವಿತೆ ಪ್ರತಿ ಹಳ್ಳಿ ತಲುಪಿತು. ಅವರಿಗಿರುವ ಕ್ರಿಯಾಶೀಲತೆ, ಸಾಹಿತ್ಯ ಪ್ರೇಮ ಮತ್ತು ತುಂಟತನ ಎಲ್ಲರನ್ನೂ ಆಕರ್ಷಿಸುತ್ತಿತ್ತು. ಮಿತಿಗಳ ಚೌಕಟ್ಟಲ್ಲಿನಲ್ಲಿ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಅಮೂಲ್ಯವಾದ ವಿಷಯಗಳನ್ನು ಬಿಟ್ಟು ಹೋಗಿದ್ದಾರೆ. ಹೀಗಾಗಿ, ಅವರನ್ನು ಅಧ್ಯಯನ ಮಾಡಬೇಕು’ ಎಂದರು.
‘ಯಾವುದೇ ಒಬ್ಬ ದೊಡ್ಡ ಲೇಖಕ ಒಂದು ಬಾರಿ ವ್ಯವಸ್ಥೆಯೊಂದಿಗೆ ಸೌಮ್ಯವಾಗಿ ವರ್ತಿಸಿದರೆ ಸಾಹಿತ್ಯದ ಆಕ್ರೋಶ, ಸಿಟ್ಟು
ದುರ್ಬಲವಾಗುತ್ತದೆ. ಸಿದ್ದಲಿಂಗಯ್ಯ ಅವರು ತಮ್ಮನ್ನು ಆವರಿಸಿಕೊಂಡ ಸಂಕೋಲೆಗಳಿಂದಬಿಡುಗಡೆಯಾಗಲು ಪ್ರಯತ್ನಿಸುತ್ತಿದ್ದರು. ಆದರೆ, ಸಾಧ್ಯವಾಗುತ್ತಿರಲಿಲ್ಲ. ಕಡೆಯ ದಿನಗಳ ವರೆಗೂ ಬರೆಯಬೇಕಾದ ಕಾಳಜಿ, ಮನಸ್ಸು ಅವರಲ್ಲಿತ್ತು. ತಮ್ಮ ನೆನಪು ಗಳನ್ನುಅವರು ಬರೆದಿದ್ದರೆ ಕನ್ನಡ ಸಾಹಿತ್ಯಕ್ಕೆ ದೊಡ್ಡ ಕೊಡುಗೆಯಾಗು
ತ್ತಿತ್ತು’ ಎಂದು ಹೇಳಿದರು.
ಕಾವ್ಯದ ಮೂಲಕ ಕಾಯಕಲ್ಪ:ಮಂಜುನಾಥ್ ಡಿ.ಎಸ್. ಅವರ ‘ಕೊರಕಲಿನ ಜಾಡಿನಲ್ಲಿ’ ಕೃತಿ ಬಿಡುಗಡೆ ಮಾಡಿದ ಕವಿ ದೊಡ್ಡ ರಂಗೇಗೌಡ, ‘ಬೈಗುಳವನ್ನೇ ಕಾವ್ಯವಾಗಿ ಪರಿವರ್ತಿಸಿ, ಹೃದಯದೊಳಗಿನ ಅಸಮಾನತೆಯನ್ನು ತೀವ್ರವಾಗಿ ಬರೆ ದವರು ಸಿದ್ದಲಿಂಗಯ್ಯ. ವಾಮನ ಮೂರ್ತಿಯಂತಿದ್ದ ಅವರಲ್ಲಿ ಜ್ವಾಲಾ ಮುಖಿಯಿತ್ತು. ಅವರ ಕಾವ್ಯದಲ್ಲಿ ನಿರ್ಭಯತೆ, ವೈಚಾರಿಕತೆ ಕಾಣಬಹುದು. ರೋಗಗ್ರಸ್ಥ ಸಮಾಜಕ್ಕೆ ಕಾವ್ಯದ ಮೂಲಕ ಕಾಯಕಲ್ಪ ಒದಗಿಸಿದರು’ ಎಂದು ಹೇಳಿದರು.
ಸಿದ್ದಲಿಂಗಯ್ಯನವರ ಪತ್ನಿ ರಮಾ ಕುಮಾರಿ, ‘ಸಿದ್ದಲಿಂಗಯ್ಯ ಅವರ ಸಂಪರ್ಕಕ್ಕೆ ಬಂದವರಿಗೆ ಅವರನ್ನು ಮರೆಯಲು ಸಾಧ್ಯವಾಗುತ್ತಿರಲಿಲ್ಲ. ಶಿಷ್ಯರನ್ನು ಬೆಳೆಸುವ ಬಗೆ ಅವರಿಗೆ ತಿಳಿದಿತ್ತು. ಎಲ್ಲರ ಸ್ನೇಹಗಳಿಸಿದ್ದ ಅವರು, ಸಮಸಮಾಜ ನಿರ್ಮಾಣಕ್ಕೆ ಶ್ರಮಿಸಿದರು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.